ಜೆಕರ್ಯ 10 - ಕನ್ನಡ ಸತ್ಯವೇದವು C.L. Bible (BSI)ಭವ್ಯಭವಿಷ್ಯದ ವಾಗ್ದಾನ 1 ವಸಂತಕಾಲದಲ್ಲಿ ಮಳೆಗಾಗಿ ಸರ್ವೇಶ್ವರಸ್ವಾಮಿಗೆ ಪ್ರಾರ್ಥನೆ ಮಾಡಿರಿ. ಮೋಡ ಮಿಂಚುಗಳನ್ನು ಗಾಳಿಮಳೆಯನ್ನು ಉಂಟುಮಾಡುವವರು ಅವರೇ. ಸರ್ವರಿಗೂ ಹೊಲಗದ್ದೆಗಳಲ್ಲಿ ಪೈರುಪಚ್ಚೆಗಳನ್ನು ನೀಡುವವರು ಅವರೇ. 2 ಗೃಹದೇವತೆಗಳು ನುಡಿಯುವುದು ಜೊಳ್ಳು; ಶಕುನ ಹೇಳುವವರ ಮಾತು ಸುಳ್ಳು. ಸ್ವಪ್ನಕಾರರ ಕನಸುಗಳು ಕಲ್ಪಿತ, ಅವರು ಹೇಳುವ ಸಮಾಧಾನ ವ್ಯರ್ಥ, ಈ ಕಾರಣ ಜನರು ಕುರಿಗಳಂತೆ ಚದರಿದ್ದಾರೆ; ಕುರುಬನಿಲ್ಲದೆ ಕಂಗೆಟ್ಟಿದ್ದಾರೆ. 3 ಸರ್ವೇಶ್ವರ ಹೀಗೆನ್ನುತ್ತಾರೆ: “ಎಂತಲೇ ಕುರಿಗಾಹಿಗಳ ಮೇಲೆ ನನ್ನ ಕೋಪ ಭುಗಿಲೆದ್ದಿದೆ. ಆ ಮುಂದಾಳುಗಳ ಮೇಲೆ ನನ್ನ ದಂಡನೆ ಎರಗಲಿದೆ. ಸೇನಾಧೀಶ್ವರ ಸರ್ವೇಶ್ವರನಾದ ನಾನು ಜುದೇಯ ಕುಲವನ್ನು ನನ್ನ ಮಂದೆಯಂತೆ ಪರಿಪಾಲಿಸುವೆನು. ಅದನ್ನು ವೀರ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವೆನು. 4 ಆ ಕುಲದಿಂದಲೇ ಮೂಲೆಗಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲುಗಳು ಬರುವುವು. ಆ ಕುಲದಿಂದಲೇ ಸಕಲ ಅಧಿಕಾರಿಗಳು ಹೊರಬರುವರು. 5 ಇವರೆಲ್ಲರು ರಣವೀರರಂತೆ ಶತ್ರುಗಳನ್ನು ಬೀದಿಕೆಸರಿನಲ್ಲಿ ತುಳಿದುಬಿಡುವರು. ಸರ್ವೇಶ್ವರ ತಮ್ಮ ಸಂಗಡ ಇದ್ದಾರೆಂದು ಧೈರ್ಯದಿಂದ ಯುದ್ಧಮಾಡುವರು, ಎದುರಿಸುವ ಕುದುರೆ ಸವಾರರನ್ನು ಭ್ರಾಂತಿಗೊಳಿಸುವರು.” 6 “ಬಲಗೊಳಿಸುವೆನು ಯೆಹೂದ್ಯ ಕುಲವನು ಉದ್ಧರಿಸುವೆನು ಜೊಸೇಫನ ವಂಶವನು. ಕನಿಕರಿಸುವೆನು, ಮರಳಿ ಬರಮಾಡುವೆನು ಅವರನು ನಾನು ಕೈಬಿಟ್ಟವರಂತೆ ಇರಲಾರರವರು ಇನ್ನು. ಏಕೆನೆ ನಾನೇ ದೇವ ಸರ್ವೇಶ್ವರ ಅವರಿಗೆ ಕಿವಿಗೊಡುವೆನು ನಾನು ಅವರ ಕರೆಗೆ ಸದುತ್ತರವೀಯುವೆನು ಅವರ ಮೊರೆಗೆ. 7 ಬಲಾಢ್ಯ ವೀರರಾಗುವರು ಎಫ್ರಯಿಮ್ ಕುಲದವರು ದ್ರಾಕ್ಷಾರಸ ಕುಡಿದವರಂತೆ ಮನದಲ್ಲಿ ಸುಖಿಸುವರು. ಇದಕಂಡು ಸಂತೋಷಿಸುವರು ಅವರ ಕುವರಕುವರಿಯರು ಸರ್ವೇಶ್ವರಸ್ವಾಮಿಯಲಿ ಹೃತ್ಪೂರ್ವಕವಾಗಿ ಆನಂದಗೊಳ್ಳುವರು. 8 “ಸಭೆ ಸೇರಿಸುವೆನವರನು ನಿಸ್ಸಂದೇಹವಾಗಿ ವಿಮುಕ್ತಗೊಳಿಸುವೆನವರನು ಕರೆದು ಸನ್ನೆಮಾಡಿ ಹಿಂದಿನಂತೆ ಮುಂದೆಯೂ ಬೆಳೆವರವರು ಸಮೃದ್ಧಿಯಾಗಿ. 9 ಚದರಿದೆನಾದರೂ ಅವರನು ಅನ್ಯರಾಷ್ಟ್ರಗಳಲಿ ಸ್ಮರಿಸಿಕೊಳ್ಳುವರವರು ನನ್ನನು ದೂರದೇಶಗಳಲಿ ಹಿಂದಿರುಗುವರು ಸಂತಾನ ಸಮೇತ ಬದುಕಿಬಾಳಿ. 10 ಕರೆತರುವೆನವರನು ಈಜಿಪ್ಟ್, ಅಸ್ಸೀರಿಯ ನಾಡುಗಳಿಂದ ಗಿಲ್ಯಾದ್, ಲೆಬೊನೇನ್ಗಳಲ್ಲವರು ಬಂದು ಸೇರುವುದರಿಂದ ತುಂಬಿತುಳುಕುವುವು ಆ ನಾಡುಗಳು ಜನಸ್ತೋಮದಿಂದ. 11 ದಾಟಿಬರುವರವರು ಕಷ್ಟವೆಂಬ ಕಡಲನು ಛೇದಿಸಿಬಿಡುವೆನು ಅಲ್ಲಕಲ್ಲೋಲ ಸಮುದ್ರವನು. ತಳದ ತನಕ ಒಣಗಿಹೋಗುವುದು ನೈಲ್ ನದಿಯು ಕುಗ್ಗಿಹೋಗುವುದು ಅಸ್ಸೀರಿಯಾದ ಗರ್ವವು ತಪ್ಪಿಹೋಗುವುದು ಈಜಿಪ್ಟಿನ ರಾಜದರ್ಪವು. 12 ಬಲಿಷ್ಠರಾಗುವರಾ ಜನರು ಸರ್ವೇಶ್ವರನಲಿ ಹೆಚ್ಚಳಪಡುವರು ಆತನ ನಾಮದಲಿ,” ನುಡಿದಿಹನು ಸರ್ವೇಶ್ವರ ಈ ರೀತಿಯಲಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India