Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಜ್ರ 8 - ಕನ್ನಡ ಸತ್ಯವೇದವು C.L. Bible (BSI)


ಬಾಬಿಲೋನಿನಿಂದ ಹಿಂದಿರುಗಿದವರ ಪಟ್ಟಿ

1 ಅರ್ತಷಸ್ತನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರ ಹೀಗಿದೆ:

2 ಫೀನೆಹಾಸನ ಸಂತಾನದವರಲ್ಲಿ ಗೇರ್ಷೋಮ್; ಈತಾಮಾರನ ಸಂತಾನದವರಲ್ಲಿ ದಾನಿಯೇಲ್;

3 ದಾವೀದನ ಸಂತಾನದವರಲ್ಲಿ ಶೆಕನ್ಯನ ಮೊಮ್ಮಗನಾದ ಹಟ್ಟೂಷ್; ಪರೋಷಿನವರಲ್ಲಿ ಜೆಕರ್ಯ ಮತ್ತು ಅವನೊಡನೆ ಅವನ ವಂಶಕ್ಕೆ ಸೇರಿದ 150 ಮಂದಿ ಗಂಡಸರು;

4 ಪಹತ್ ಮೋವಾಬಿನವರಲ್ಲಿ ಜೆರಹ್ಯನರ ಮಗ ಎಲ್ಯೆ ಹೋವೇನ್ಯೆಯ ಮತ್ತು ಅವನೊಡನೆ 200 ಮಂದಿ ಗಂಡಸರು;

5 ಜತ್ತೂವಿನವರಲ್ಲಿ ಯಹಜೀಯೇಲನ ಮಗ ಶೆಕನ್ಯನು ಮತ್ತು ಅವನೊಡನೆ 300 ಮಂದಿ ಗಂಡಸರು;

6 ಆದೀನನವರಲ್ಲಿ ಯೋನಾತಾನನ ಮಗ ಎಬೆದನು ಮತ್ತು ಅವನೊಡನೆ 50 ಮಂದಿ ಗಂಡಸರು;

7 ಎಲಾಮಿನವರಲ್ಲಿ ಅತಲ್ಯನ ಮಗ ಯೆಶಾಯನ ಮತ್ತು ಅವನೊಡನೆ 70 ಮಂದಿ ಗಂಡಸರು;

8 ಶೆಫಟ್ಯನವರಲ್ಲಿ ಮೀಕಾಯೇಲನ ಮಗ ಜೆಬದ್ಯನು ಮತ್ತು ಅವನೊಡನೆ 10 ಮಂದಿ ಗಂಡಸರು;

9 ಯೋವಾಬನವರಲ್ಲಿ ಯೆಹೀಯೇಲನ ಮಗ ಓಬದ್ಯನು ಮತ್ತು ಅವನೊಡನೆ 218 ಮಂದಿ ಗಂಡಸರು;

10 ಬಾನೀಯವರಲ್ಲಿ ಯೋಸಿಫ್ಯನ ಮಗ ಶೆಲೋಮೀತನು ಮತ್ತು ಅವನೊಡನೆ 160 ಮಂದಿ ಗಂಡಸರು;

11 ಬೇಬೈಯವರಲ್ಲಿ ಬೇಬೈಯ ಮಗ ಜೆಕರ್ಯನು ಮತ್ತು ಅವನೊಡನೆ 28 ಮಂದಿ ಗಂಡಸರು;

12 ಅಜ್ಗಾದನವರಲ್ಲಿ ಹಕ್ಕಾಟಾನನ ಮಗ ಯೋಹಾನಾನನು ಮತ್ತು ಅವನೊಡನೆ 110 ಮಂದಿ ಗಂಡಸರು;

13 ಅದೋನೀಕಾಮಿನವರಲ್ಲಿ ಕಡೆಯವರಾದ ಎಲೀಫೆಟ್, ಎಟ್ಮೀಯೇಲ್, ಶೆಮಾಯ ಎಂಬ ಹೆಸರುಳ್ಳವರು ಮತ್ತು ಅವರೊಡನೆ 60 ಮಂದಿ ಗಂಡಸರು;

14 ಬಿಗ್ವೈಯವರಲ್ಲಿ ಜಕ್ಕೂರನ ಮಗ ಊತೈಯ ಮತ್ತು ಅವನೊಡನೆ 70 ಮಂದಿ ಗಂಡಸರು;

15 ಅಹವಾ ಪ್ರಾಂತ್ಯದ ಕಡೆಗೆ ಹರಿಯುವ ನದಿಯ ಬಳಿಯಲ್ಲಿ ನಾನು ಇವರನ್ನು ಒಂದುಗೂಡಿಸಿದೆ. ಅಲ್ಲಿ ಮೂರು ದಿನ ಪಾಳೆಯ ಮಾಡಿಕೊಂಡ ಮೇಲೆ ನನ್ನೊಡನೆ ಜನಸಾಮಾನ್ಯರು ಹಾಗು ಯಾಜಕರು ಬಂದಿದ್ದರಾದರೂ ಲೇವಿಯರಲ್ಲಿ ಯಾರೂ ಬರದೆ ಇದ್ದುದು ಕಂಡುಬಂದಿತು.

16 ಆದುದರಿಂದ ಮುಖ್ಯಸ್ಥರಾದ ಎಲೀಯೇಜೆರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ, ಮೆಷುಲ್ಲಾಮ್ ಇವರನ್ನೂ

17 ಪಂಡಿತರಾದ ಯೋಯಾರೀಬ್, ಎಲ್ನಾತಾನ್ ಇವರನ್ನೂ ಕರೆಯಿಸಿದೆ; ಕಾಸಿಫ್ಯ ಊರಿನ ಮುಖ್ಯಸ್ಥನಾದ ಇದ್ದೋವಿನ ಬಳಿಗೆ ಹೋಗಬೇಕೆಂದು ಅಪ್ಪಣೆಮಾಡಿದೆ; ನಮ್ಮ ಬಳಿಗೆ ದೇವಾಲಯ ಸೇವಕರನ್ನು ಕಳುಹಿಸುವ ಹಾಗೆ ಅವರು ಇದ್ದೋವಿಗೂ ಕಾಸಿಫ್ಯ ಊರಿನಲ್ಲಿ ವಾಸಿಸುತ್ತಿದ್ದ ಅವನ ಸಹೋದರರಾದ ದೇವಸ್ಥಾನ ಪರಿಚಾರಕ ವರ್ಗದವರಿಗೂ ಹೇಳತಕ್ಕ ಮಾತುಗಳನ್ನು ಹೇಳಿಕೊಟ್ಟೆ. ಆ ಊರಿನವರು ಪರಿಚಾರಕ ವರ್ಗದವರಾಗಿದ್ದರು.

18 ನಮ್ಮ ದೇವರ ಕೃಪಾಹಸ್ತ ನಮ್ಮ ಮೇಲೆ ಇದ್ದುದರಿಂದ ಅವರು ಇಸ್ರಯೇಲನ ಮಗ ಲೇವಿಯ ಕುಲದ ಮಹ್ಲೀ ಸಂತಾನದವರಲ್ಲಿ ಈಸ್ಸೆಕೆಲನನ್ನು, ಶೇರೇಬ್ಯನನ್ನು, ಅವನ ಪುತ್ರ ಭ್ರಾತೃಗಳಲ್ಲಿ ಹದಿನೆಂಟು ಮಂದಿಯನ್ನು,

19 ಮೆರಾರೀಯರಲ್ಲಿ ಹಷಭ್ಯನನ್ನು, ಅವನೊಡನೆ ಯೆಶಾಯನನ್ನು, ಅವರ ಪುತ್ರಭ್ರಾತೃಗಳಲ್ಲಿ ಇಪ್ಪತ್ತು ಮಂದಿಯನ್ನು,

20 ಹಾಗು ದಾವೀದನೂ ಅವನ ಸರದಾರರೂ ಲೇವಿಯರ ಸಹಾಯಕ್ಕಾಗಿ ಕೊಟ್ಟ ದೇವಸ್ಥಾನ ಪರಿಚಾರಕರಲ್ಲಿ ಇನ್ನೂರ ಇಪ್ಪತ್ತು ಮಂದಿಯನ್ನು ನಮ್ಮ ಬಳಿಗೆ ಕರೆದುಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.

21 ಆಮೇಲೆ ಆ ಅಹವಾ ನದಿಯ ಬಳಿಯಲ್ಲಿ, ನಾವು ಉಪವಾಸದಿಂದಿದ್ದು ನಮ್ಮ ದೇವರ ಮುಂದೆ ನಮ್ಮನ್ನೇ ತಗ್ಗಿಸಿಕೊಂಡು, ನಮಗೂ ನಮ್ಮ ಮನೆಯವರಿಗೂ ನಮ್ಮ ಎಲ್ಲ ಆಸ್ತಿಗೂ ಪ್ರಯಾಣದಲ್ಲಿ ಶುಭವನ್ನು ಕೋರಬೇಕೆಂದು ಪ್ರಕಟಿಸಿದೆ.

22 ನಮ್ಮ ದೇವರ ಕೃಪಾಹಸ್ತ ಅವರ ಎಲ್ಲ ಶರಣಾರ್ಥಿಗಳ ಮೇಲಿತ್ತು. ನಮ್ಮ ದೇವರನ್ನು ತೊರೆದುಬಿಟ್ಟವರೆಲ್ಲರು ಅವರ ಪ್ರಬಲವಾದ ರೌದ್ರಕ್ಕೆ ಗುರಿಯಾಗುವರು ಎಂದು ನಾವು ಅರಸನ ಮುಂದೆ ಹೇಳಿದ್ದೆವು. ಆದುದರಿಂದ ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕಾಗಿ ಸೈನ್ಯವನ್ನಾಗಲಿ, ಅಶ್ವಬಲವನ್ನಾಗಲಿ ಕೇಳಿಕೊಳ್ಳುವುದಕ್ಕೆ ನಾನು ನಾಚಿಕೊಂಡಿದ್ದೆ.

23 ನಾವು ಈ ಕಾರಣ ಉಪವಾಸಮಾಡಿ ದೇವರನ್ನು ಪ್ರಾರ್ಥಿಸಿದೆವು; ಅವರು ನಮಗೆ ಪ್ರಸನ್ನರಾದರು.


ದೇವಾಲಯಕ್ಕೆ ಸಲ್ಲಿಸಲಾದ ಕಾಣಿಕೆಗಳು

24 ಅನಂತರ ನಾನು ಯಾಜಕರ ಮುಖ್ಯಸ್ಥರಿಂದ ಶೇರೇಬ್ಯನನ್ನೂ ಹಷಬ್ಯನನ್ನೂ ಇವರ ಸಹೋದರರಲ್ಲಿ ಹತ್ತು ಮಂದಿಯನ್ನೂ ಆರಿಸಿಕೊಂಡೆ.

25 ಅರಸನಿಂದಲು, ಅವನ ಮಂತ್ರಿಗಳಿಂದಲು, ಪದಾಧಿಕಾರಿಗಳಿಂದಲು, ಅಲ್ಲಿದ್ದ ಎಲ್ಲ ಇಸ್ರಯೇಲರಿಂದಲು ನಮ್ಮ ದೇವರ ಆಲಯಕ್ಕೆ ಕಾಣಿಕೆಯಾಗಿ ಕೊಡಲಾಗಿದ್ದ ಬೆಳ್ಳಿಬಂಗಾರವನ್ನು ಹಾಗು ಸಾಮಾಗ್ರಿಗಳನ್ನು ತೂಕಮಾಡಿ ಅವರಿಗೆ ಒಪ್ಪಿಸಿದೆ.

26 ಅವರ ಕೈಗೆ ಕೊಟ್ಟ ಸಾಮಾನುಗಳ ತೂಕ: ಬೆಳ್ಳಿ 22 ಮೆಟ್ರಿಕ್ ಟನ್; ಬೆಳ್ಳಿಯ ನೂರು ಸಾಮಾಗ್ರಿಗಳ ತೂಕ 70 ಕಿಲೋಗ್ರಾಂ; ಬಂಗಾರ 3400 ಕಿಲೋಗ್ರಾಂ.

27 ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ 8:4 ಕಿಲೋಗ್ರಾಂ; ಇವುಗಳಲ್ಲದೆ ಶ್ರೇಷ್ಠವಾದ ಕಂಚಿನ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.

28 ನಾನು ಅವರಿಗೆ, ‘ನೀವು ಸರ್ವೇಶ್ವರನ ಸ್ವಕೀಯರು; ಆ ಪಾತ್ರೆಗಳು ಕೂಡ ದೇವರ ವಸ್ತುಗಳು; ಆ ಬೆಳ್ಳಿಬಂಗಾರ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಸಮರ್ಪಿತವಾದ ಕಾಣಿಕೆ.

29 ಆದುದರಿಂದ ನೀವು ಜಾಗರೂಕರಾಗಿ ಇದ್ದು ಜೆರುಸಲೇಮಿನಲ್ಲಿರುವ ಯಾಜಕರ ಮತ್ತು ಲೇವಿಯರ ಮುಖ್ಯಸ್ಥರ ಮುಂದೆ ಹಾಗು ಇಸ್ರಯೇಲ್ ಗೋತ್ರಪ್ರಧಾನರ ಮುಂದೆ ಇವುಗಳನ್ನು ತೂಕಮಾಡಿ ಸರ್ವೇಶ್ವರನ ಆಲಯದ ಕೊಠಡಿಗಳಲ್ಲಿಡುವವರೆಗೂ ಎಚ್ಚರಿಕೆಯಿಂದ ನೋಡಿಕೊಳ್ಳಿ’ ಎಂದು ಹೇಳಿದೆ.

30 ಆ ಯಾಜಕರು ಹಾಗು ಲೇವಿಯರು ಜೆರುಸಲೇಮಿನ ದೇವಾಲಯಕ್ಕೆ ತಲುಪಿಸುವ ಉದ್ದೇಶದಿಂದ ಆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿಸಿ ತಮ್ಮ ವಶದಲ್ಲಿ ಇಟ್ಟುಕೊಂಡರು.


ಮರಳಿ ಜೆರುಸಲೇಮಿಗೆ

31 ನಾವು ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಅಹವಾ ನದಿಯನ್ನು ಬಿಟ್ಟು ಜೆರುಸಲೇಮಿಗೆ ಹೊರಟೆವು. ನಮ್ಮ ದೇವರ ಕೃಪಾಹಸ್ತ ನಮ್ಮನ್ನು ಪಾಲಿಸುತ್ತಾ ಇತ್ತು. ಶತ್ರುಗಳ ಹಾಗು ದಾರಿಯಲ್ಲಿ ಹೊಂಚುಹಾಕುವವರ ಕೈಗೆ ಸಿಕ್ಕದಂತೆ ಅವರು ನಮ್ಮನ್ನು ಪಾರುಮಾಡಿದರು.

32 ನಾವು ಜೆರುಸಲೇಮನ್ನು ಸೇರಿ ಮೂರು ದಿವಸ ವಿಶ್ರಮಸಿಕೊಂಡೆವು.

33 ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿ ಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗ ಯೋಜಾಬಾದ್, ಬಿನ್ನೂಯನ ಮಗ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.

34 ಎಲ್ಲವುಗಳ ತೂಕ ತಕ್ಷಣವೇ ಲಿಖಿತವಾಯಿತು.

35 ದೇಶಾಂತರದ ಸೆರೆಯಿಂದ ಮರಳಿ ಬಂದವರು ಇಸ್ರಯೇಲ್ ದೇವರಿಗೆ ತೊಂಬತ್ತಾರು ಟಗರುಗಳನ್ನು, ಎಪ್ಪತ್ತೇಳು ಕುರಿಮರಿಗಳನ್ನು, ಸಮಸ್ತ ಇಸ್ರಯೇಲರ ಪರವಾಗಿ ಹನ್ನೆರಡು ಹೋರಿಗಳನ್ನು ಹಾಗು ದೋಷಪರಿಹಾರಾರ್ಥವಾಗಿ ಹನ್ನೆರಡು ಹೋತಗಳನ್ನು ದಹನಬಲಿಗಾಗಿ ಸಮರ್ಪಿಸಿದರು. ಅಂತೆಯೇ ಇವೆಲ್ಲವೂ ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿತವಾದುವು.

36 ಆಮೇಲೆ ಅವರು ರಾಜಶಾಸನವನ್ನು ರಾಜೋದ್ಯೋಗಸ್ಥರಿಗೂ ನದಿಯಾಚೆಯ ರಾಜ್ಯಪಾಲರಿಗೂ ಒಪ್ಪಿಸಿದರು. ಅಂದಿನಿಂದ ಆ ಅಧಿಕಾರಿಗಳು ಜನರಿಗೂ ದೇವಾಲಯಕ್ಕೂ ಸಹಾಯಮಾಡಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು