ಎಜ್ರ 1 - ಕನ್ನಡ ಸತ್ಯವೇದವು C.L. Bible (BSI)ಸ್ವದೇಶಕ್ಕೆ ಹಿಂತಿರುಗಲು ಯೆಹೂದ್ಯರಿಗೆ ರಾಜ ಸೈರಸನು ಕೊಟ್ಟ ಅಪ್ಪಣೆ 1 ಸೈರಸನು ಪರ್ಷಿಯ ದೇಶದ ಅರಸ. ಆತನ ಆಳ್ವಿಕೆಯ ಮೊದಲನೆಯ ವರ್ಷದಲ್ಲೆ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸಿದರು. ಅದಕ್ಕಾಗಿಯೆ ಅರಸ ಸೈರಸನನ್ನು ಪ್ರೇರೇಪಿಸಿ ಅವನ ರಾಜ್ಯದಲ್ಲೆಲ್ಲಾ ಡಂಗುರ ಹಾಗು ಪತ್ರಗಳ ಮೂಲಕ ಹೀಗೆ ಪ್ರಕಟಿಸುವಂತೆ ಮಾಡಿದರು: 2 ಪರ್ಷಿಯ ರಾಜನಾದ ಸೈರಸೆಂಬ ನನ್ನ ಮಾತನ್ನು ಕೇಳಿರಿ; ಪರಲೋಕ ದೇವರಾದ ಸರ್ವೇಶ್ವರಸ್ವಾಮಿ ಭೂಲೋಕದ ಎಲ್ಲ ರಾಜ್ಯಗಳನ್ನು ನನಗೆ ಕೊಟ್ಟಿದ್ದಾರೆ; ‘ನನಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟಿಸಬೇಕು’ ಎಂದು ಅವರು ಆಜ್ಞಾಪಿಸಿದ್ದಾರೆ. 3 ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅಂಥವರು ಜುದೇಯ ನಾಡಿನ ಜೆರುಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ, ಒಂದು ದೇವಾಲಯವನ್ನು ಕಟ್ಟಲಿ; ಅವರ ಸಂಗಡ ಅವರ ದೇವರಿರಲಿ! 4 ಸೆರೆಯಾಳುಗಳಾಗಿ ಅಳಿದುಳಿದವರು ಯಾವ ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರಿನ ಜನರು ಜೆರುಸಲೇಮಿನ ದೇವಾಲಯಕ್ಕಾಗಿ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕುಸಾಮಗ್ರಿ, ಪ್ರಾಣಿಪಶು, ಇವುಗಳನ್ನು ಕೊಟ್ಟು ಅವರಿಗೆ ಸಹಾಯ ಮಾಡಲಿ,” ಎಂದು ಪ್ರಚುರಪಡಿಸಿದನು. 5 ಈ ಪ್ರಕಟನೆಯನ್ನು ಕೇಳಿ, ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಕ್ಕೆ ಸೇರಿದ ಮುಖ್ಯಸ್ಥರು, ಯಾಜಕರು, ಲೇವಿಯರು ಹಾಗು ದೈವಪ್ರೇರಿತರಾದ ಎಲ್ಲರು ಜೆರುಸಲೇಮಿನಲ್ಲಿ ಸರ್ವೇಶ್ವರನಿಗೆ ಪುನಃ ಆಲಯಕಟ್ಟುವುದಕ್ಕಾಗಿ ಹೊರಟರು. 6 ಅವರ ನೆರೆಯವರೆಲ್ಲರು ಕೊಡುಗೆಗಳನ್ನು ಕೊಟ್ಟರು; ಬೆಳ್ಳಿ ಸಾಮಾನುಗಳು, ಬಂಗಾರದ ಆಭರಣಗಳು, ಪಶುಪ್ರಾಣಿಗಳು, ಶ್ರೇಷ್ಠವಸ್ತುಗಳು, ಇತ್ಯಾದಿಗಳನ್ನು ನೀಡಿ ಸಹಕರಿಸಿದರು. 7 ಜೆರುಸಲೇಮಿನಿಂದ ಕೊಳ್ಳೆಹೊಡೆದು ತಂದಿದ್ದ ಸಾಮಾನುಗಳನ್ನು ನೆಬೂಕದ್ನೆಚ್ಚರನು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದನು. 8 ಪರ್ಷಿಯಾದ ರಾಜ ಸೈರಸನು, ಸರ್ವೇಶ್ವರನ ಆಲಯಕ್ಕೆ ಸೇರಿದ್ದ ಸಾಮಾನುಗಳನ್ನು ಅಲ್ಲಿಂದ ತೆಗೆಸಿ ಖಜಾಂಚಿಯಾಗಿದ್ದ ಮಿತ್ರದಾತನಿಗೆ ಒಪ್ಪಿಸಿದನು . ಮಿತ್ರದಾತನು ಅವುಗಳನ್ನು ಜುದೇಯದ ರಾಜ್ಯ ಪಾಲನಾದ ಶೆಷ್ಬಚ್ಚರನಿಗೆ ಲೆಕ್ಕ ಮಾಡಿಕೊಟ್ಟನು. 9-10 ಆ ಸಾಮಾನುಗಳ ಪಟ್ಟಿ ಹೀಗಿದೆ :- ಬಂಗಾರದ ಬೋಗುಣಿಗಳು 30 ಬೆಳ್ಳಿಯ ಬೋಗುಣಿಗಳು 1000 ಇತರ ಬೋಗುಣಿಗಳು 29 ಚಿನ್ನದ ಬಟ್ಟಲುಗಳು 30 ಕಡಿಮೆ ಮಟ್ಟದ ಬೆಳ್ಳಿಯ ಬಟ್ಟಲುಗಳು 410 ಇತರ ಪಾತ್ರೆಗಳು 1000 11 ಬೆಳ್ಳಿಬಂಗಾರದ ನಾನಾ ಸಾಮಾನುಗಳ ಒಟ್ಟು ಸಂಖ್ಯೆ - 5400: ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಜೆರುಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ಬಂದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India