Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆಮೋಸ 7 - ಕನ್ನಡ ಸತ್ಯವೇದವು C.L. Bible (BSI)


ಮಿಡತೆಗಳ ದರ್ಶನ

1 ಒಡೆಯರಾದ ಸರ್ವೇಶ್ವರ ನನಗೆ ತೋರಿಸಿದ ದರ್ಶನ ಇದು: ಹಿಂಗಾರು ಮಳೆ ಬಿದ್ದಿತ್ತು. ಪೈರು ಸೊಂಪಾಗಿ ಬೆಳೆಯಲು ಆರಂಭಿಸಿತ್ತು. ಈಗಾಗಲೇ ರಾಜಾದಾಯದ ಹುಲ್ಲಿನ ಕೊಯಿಲು ಮುಗಿದು ಮತ್ತೆ ಹುಲ್ಲು ಬೆಳೆಯುತ್ತಿತ್ತು. ಆಗ ಸರ್ವೇಶ್ವರ ಮಿಡತೆಗಳ ಗುಂಪೊಂದನ್ನು ಹೊರಡಿಸಿದರು.

2 ಮಿಡತೆಗಳು ನಾಡಿನ ಪೈರು ಪಚ್ಚೆಯನ್ನೆಲ್ಲ ತಿಂದುಬಿಟ್ಟವು. ಆಮೇಲೆ ನಾನು ಪ್ರಭುವಿಗೆ ಹೀಗೆಂದು ಮೊರೆಯಿಟ್ಟೆ: “ಒಡೆಯರಾದ ಸರ್ವೇಶ್ವರಾ, ನಮ್ಮನ್ನು ಆಲಿಸಿ, ಕ್ಷಮಿಸಿರಿ; ಅತಿ ಚಿಕ್ಕದಾದ ಯಕೋಬ ಜನಾಂಗ ಈ ಪಿಡುಗಿನಿಂದ ಉಳಿಯುವುದುಂಟೆ?”

3 ಇದನ್ನು ಕೇಳಿ ಸರ್ವೇಶ್ವರ ಮನಮರುಗಿದರು. “ಈ ದರ್ಶನ ನೆರವೇರುವುದಿಲ್ಲ” ಎಂದು ಅಭಯವಿತ್ತರು.


ಅಗ್ನಿಯ ದರ್ಶನ

4 ಒಡೆಯರಾದ ಸರ್ವೇಶ್ವರ ನನಗೆ ಇನ್ನೊಂದು ದರ್ಶನವನ್ನು ತೋರಿಸಿದರು. ಅವರು ತನ್ನ ಜನರನ್ನು ದಂಡಿಸುವುದಕ್ಕಾಗಿ ಬೆಂಕಿಯನ್ನು ಬರಮಾಡಿದರು. ಅದು ಆಳವಾದ ಮಹಾಸಾಗರವನ್ನೂ ಇಡೀ ನಾಡನ್ನೂ ಕಬಳಿಸುವುದರಲ್ಲಿತ್ತು.

5 ಆಗ ನಾನು ಆ ಸ್ವಾಮಿಗೆ: “ಆಲಿಸಿ, ಈ ಪಿಡುಗನ್ನು ತಪ್ಪಿಸಿ, ಅತಿ ಚಿಕ್ಕದಾದ ಯಕೋಬ ಜನಾಂಗ ಮುಂದೆ ಹೇಗೆ ಉಳಿದೀತು” ಎಂದು ಮೊರೆಯಿಟ್ಟೆ.

6 ಒಡೆಯರಾದ ಸರ್ವೇಶ್ವರ ಇದನ್ನು ಕೇಳಿ ಮನಮರುಗಿ: “ಈ ದರ್ಶನ ನೆರವೇರುವುದಿಲ್ಲ” ಎಂದು ಅಭಯವಿತ್ತರು.


ನೂಲುಗುಂಡಿನ ದರ್ಶನ

7 ಆ ಸ್ವಾಮಿಯಿಂದ ನನಗೆ ಮತ್ತೊಂದು ದರ್ಶನವಾಯಿತು. ಸ್ವಾಮಿ ನೂಲು ಮಟ್ಟದ ಗೋಡೆಯ ಮೇಲೆ ನಿಂತಿದ್ದರು. ಅವರ ಕೈಯಲ್ಲಿ ನೂಲುಗುಂಡೊಂದು ಇತ್ತು.

8 ಅವರು ನನಗೆ: “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಿದರು. ನಾನು “ಒಂದು ನೂಲುಗುಂಡು,” ಎಂದು ಉತ್ತರಕೊಟ್ಟೆ. ಆಗ ಸ್ವಾಮಿ, “ಇಗೋ,ನನ್ನ ಜನರಾದ ಇಸ್ರಯೇಲಿನ ಮಧ್ಯೆ ನೂಲುಗುಂಡನ್ನು ಹಿಡಿದು ಅವರ ನಡತೆ-ಗೋಡೆ ನೆಟ್ಟಗಿಲ್ಲವೆಂದು ತೋರಿಸುವೆನು. ಅವರನ್ನು ಕಂಡೂ ಕಾಣದಂತಿರದೆ, ದಂಡಿಸಿಯೇ ತೀರುವೆನು.

9 ಇಸಾಕನ ವಂಶದವರ ಎತ್ತರವಾದ ಪೂಜಾಮಂದಿರಗಳು ನೆಲಸಮವಾಗುವುವು. ಇಸ್ರಯೇಲಿನ ಪವಿತ್ರಾಲಯಗಳು ಪಾಳುಬೀಳುವುವು. ಯಾರೊಬ್ಬಾಮನ ಮನೆತನ ಕತ್ತಿಗೆ ತುತ್ತಾಗುವುದು,” ಎಂದರು.


ಆಮೋಸನ ಉಚ್ಚಾಟನೆ

10 ತರುವಾಯ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಯೇಲಿನ ಅರಸ ಯಾರೊಬ್ಬಾಮನಿಗೆ ಹೀಗೆ ಹೇಳಿಕಳುಹಿಸಿದನು: “ಆಮೋಸನು ನಿನಗೆ ವಿರುದ್ಧವಾಗಿ ಇಸ್ರಯೇಲರಲ್ಲಿ ಒಳಸಂಚು ಹೂಡಿದ್ದಾನೆ. ಅವನ ಮಾತುಗಳನ್ನು ನಾಡು ಸಹಿಸಲಾರದು.

11 ಏಕೆಂದರೆ, “ಯಾರೊಬ್ಬಾಮನು ಖಡ್ಗದಿಂದ ಹತನಾಗುವನು. ಇಸ್ರಯೇಲ್ ಸ್ವಂತ ನಾಡಿನಿಂದ ಪರದೇಶಕ್ಕೆ ಒಯ್ಯಲ್ಪಡುವುದು ಖಂಡಿತ ಎಂದು ಅವನು ನುಡಿದಿದ್ದಾನೆ.”

12 ಆ ಬಳಿಕ ಅಮಚ್ಯನು ಆಮೋಸನಿಗೆ, “ಕಣಿಹೇಳುವವನೇ, ತೊಲಗು, ಜುದೇಯ ನಾಡಿಗೆ ಓಡಿಹೋಗು; ಅಲ್ಲಿ ಪ್ರವಾದನೆಮಾಡಿ ಹೊಟ್ಟೆ ಹೊರೆದುಕೊ.

13 ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜನ ಗರ್ಭಗುಡಿ, ರಾಜ್ಯದ ಪವಿತ್ರಾಲಯ,” ಎಂದನು.

14 ಅದಕ್ಕೆ ಆಮೋಸನು ಪ್ರತ್ಯುತ್ತರವಾಗಿ: “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ನಾನೊಬ್ಬ ಗೊಲ್ಲ, ಅತ್ತಿಹಣ್ಣನ್ನು ಕೀಳುವವನು.

15 ಮಂದೆ ಕಾಯುವುದರಿಂದ ಸರ್ವೇಶ್ವರ ನನ್ನನ್ನು ಬಿಡಿಸಿದರು. ನೀನು ಹೋಗಿ ನನ್ನ ಜನರಾದ ಇಸ್ರಯೇಲರಿಗೆ ಪ್ರವಾದನೆಮಾಡು’ ಎಂದು ಹೇಳಿಕಳುಹಿಸಿದರು.

16 “ಆದ್ದರಿಂದ ಆ ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಗಮನಿಸು: ‘ಇಸ್ರಯೇಲಿಗೆ ವಿರುದ್ಧ ಪ್ರವಾದನೆ ಮಾಡಬೇಡ; ಇಸಾಕನ ಮನೆತನದ ವಿರುದ್ಧ ಮಾತೆತ್ತಬೇಡ; ಎಂದು ನೀನು ಹೇಳುತ್ತೀಯಲ್ಲವೆ?

17 ನೀನು ಹೀಗೆ ಹೇಳಿದ್ದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: ‘ನಿನ್ನ ಹೆಂಡತಿ ಈ ಪಟ್ಟಣದಲ್ಲಿ ವೇಶ್ಯೆಯಾಗುವಳು. ನಿನ್ನ ಪುತ್ರಪುತ್ರಿಯರು ಕತ್ತಿಗೆ ತುತ್ತಾಗುವರು. ನಿನ್ನ ನಾಡನ್ನು ಶತ್ರುಗಳು ವಶಪಡಿಸಿಕೊಂಡು ಹಂಚಿಕೊಳ್ಳುವರು. ನೀನು ಸಹ ಅಪವಿತ್ರವಾದ ನಾಡಿನಲ್ಲಿ ಸಾಯುವೆ. ಇಸ್ರಯೇಲರು ಖಂಡಿತವಾಗಿ ಸ್ವಂತ ನಾಡಿನಿಂದ ಪರದೇಶಕ್ಕೆ ಸೆರೆಯಾಗಿಹೋಗುವರು’,” ಎಂದು ಹೇಳಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು