ಆಮೋಸ 1 - ಕನ್ನಡ ಸತ್ಯವೇದವು C.L. Bible (BSI)1 ಜುದೇಯದಲ್ಲಿ ಮಹಾ ಭೂಕಂಪ ಆಗುವುದಕ್ಕೆ ಎರಡು ವರ್ಷಗಳ ಮುಂಚೆ, ತೆಕೋವದ ಕುರುಬರಲ್ಲೊಬ್ಬನಾದ ಆಮೋಸನಿಗೆ ಇಸ್ರಯೇಲಿನ ವಿಷಯವಾಗಿ ದೇವರಿಂದ ಬಂದ ಪ್ರಕಟನೆಗಳು ಇವು. ಆಗ ಜುದೇಯ ನಾಡನ್ನು ಉಜ್ಜೀಯನೆಂಬ ಅರಸನು ಆಳುತ್ತಿದ್ದ ಕಾಲ. ಅಂತೆಯೇ, ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರಯೇಲನ್ನು ಆಳುತ್ತಿದ್ದ ಕಾಲ. 2 ಆಮೋಸನ ಪ್ರಕಟನೆ: ಗರ್ಜಿಸುತಿಹನು ಸರ್ವೇಶ್ವರ ಸಿಯೋನಿನಿಂದ ಧ್ವನಿಗೈಯುತಿಹನು ಜೆರುಸಲೇಮಿನಿಂದ; ಬಾಡಿಹೋಗುತ್ತಿವೆ ಕುರುಬರಾ ಹುಲ್ಲುಗಾವಲುಗಳು ಒಣಗಿಹೋಗುತ್ತಿವೆ ಕಾರ್ಮೆಲ್ ಗುಡ್ಡದ ನೆತ್ತಿಯ ಗಿಡಗಳು. ಇಸ್ರಯೇಲಿನ ನೆರೆಯವರಿಗೆ ನ್ಯಾಯತೀರ್ಪು ಸಿರಿಯಾ 3 ಸರ್ವೇಶ್ವರ ಇಂತೆನ್ನುತ್ತಾರೆ: ದಮಸ್ಕದ ಜನರು ಪದೇಪದೇ ಮಾಡಿರುವ ದ್ರೋಹಗಳಿಗಾಗಿ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ. 4 ನಾನು ಹಜಾಯೇಲನ ಅರಮನೆಯ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಬೆನ್ಹದದನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. 5 ದಮಸ್ಕದ ಮಹಾದ್ವಾರಗಳನ್ನು ಕೆಡವಿಹಾಕುವೆನು. ಆವೇನಿನ ಕಣಿವೆಯಲ್ಲಿ ಸಿಂಹಾಸನಾರೂಢನಾಗಿರುವವನನ್ನು ಮತ್ತು ಬೆತ್ - ಏದೆನ್ನಿಂದ ಆಡಳಿತಾಧಿಕಾರಿಯನ್ನು ನಿರ್ಮೂಲಮಾಡುವೆನು. ಸಿರಿಯದ ಜನರು ಕೀರ್ ಪ್ರಾಂತ್ಯಕ್ಕೆ ಸೆರೆಯಾಳುಗಳಾಗಿ ಹೋಗುವರು.” ಇದು ಸರ್ವೇಶ್ವರಸ್ವಾಮಿಯ ನುಡಿ. ಫಿಲಿಷ್ಟಿಯ 6 ಸರ್ವೇಶ್ವರ ಇಂತೆನ್ನುತ್ತಾರೆ: “ಗಾಜದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಇಡೀ ಜನಾಂಗವನ್ನೇ ಸೆರೆಹಿಡಿದು ಎದೋಮ್ ನಾಡಿಗೆ ಗಡೀಪಾರು ಮಾಡಿದ್ದಾರೆ. 7 ಆದಕಾರಣ ನಾನು ಗಾಜದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. 8 ನಾನು ಅಷ್ಡೋದಿನಲ್ಲಿ ಸಿಂಹಾಸನಾರೂಢನಾಗಿ ಇರುವವನನ್ನೂ ಅಷ್ಕೆಲೋನಿನಲ್ಲಿ ಆಡಳಿತಾಧಿಕಾರಿಯನ್ನೂ ನಿರ್ಮೂಲ ಮಾಡುವೆನು. ಎಕ್ರೋನಿನ ಪಟ್ಟಣವನ್ನು ಶಿಕ್ಷಿಸುವೆನು. ಫಿಲಿಷ್ಟಿಯರಲ್ಲಿ ಅಳಿದುಳಿದವರೆಲ್ಲರೂ ನಾಶವಾಗಿಹೋಗುವರು,” ಇದೂ ಸರ್ವೇಶ್ವರಸ್ವಾಮಿಯ ನುಡಿ. ಟೈರ್ 9 ಸರ್ವೇಶ್ವರ ಇಂತೆನ್ನುತ್ತಾರೆ: “ಟೈರ್ ಪ್ರಾಂತ್ಯದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಸೋದರಪ್ರೇಮದ ಒಡಂಬಡಿಕೆಯನ್ನು ಅವರು ಮರೆತುಬಿಟ್ಟರು. ಅವರು ಇಡೀ ರಾಷ್ಟ್ರವನ್ನೇ ಸೆರೆಹಿಡಿದು ಎದೋಮ್ ನಾಡಿಗೆ ಗಡೀಪಾರು ಮಾಡಿದ್ದಾರೆ. 10 ಆದಕಾರಣ ನಾನು ಟೈರಿನ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.” ಎದೋಮ್ 11 ಸರ್ವೇಶ್ವರ ಇಂತೆನ್ನುತ್ತಾರೆ: ಎದೋಮ್ ಪ್ರಾಂತ್ಯದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ತಮ್ಮ ಸೋದರ ನಾಡಿನವರಾದ ಇಸ್ರಯೇಲರನ್ನು ಓಡಿಸಿದರು. ಅವರಿಗೆ ಕರುಣೆತೋರದೆ, ಕೊನೆಯವರೆವಿಗೂ ರೋಷವನ್ನೇ ಸಾಧಿಸಿದರು. 12 ಆದುದರಿಂದ ನಾನು ತೇಮಾನ್ ಪಟ್ಟಣದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಬೊಚ್ರದ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಅಮ್ಮೋನ್ 13 ಸರ್ವೇಶ್ವರ ಇಂತೆನ್ನುತ್ತಾರೆ: “ಅಮ್ಮೋನ್ಯರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ತಮ್ಮ ನಾಡಿನ (ಗಡಿ) ವಿಸ್ತರಣೆಗಾಗಿ ಗರ್ಭಿಣಿಯರ ಹೊಟ್ಟೆಯನ್ನೇ ತಿವಿದು ಸೀಳಿಬಿಟ್ಟಿದ್ದಾರೆ. 14 ಆದಕಾರಣ ನಾನು ರಬ್ಬದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಆಗ ಯುದ್ಧಾರ್ಭಟವೂ ಚಂಡಮಾರುತದಂಥ ಪ್ರಚಂಡ ಕಾದಾಟವೂ ಉಂಟಾಗುವುವು. 15 ಅರಸನೂ ರಾಜ್ಯಾಧಿಕಾರಿಗಳೂ ಒಟ್ಟಾಗಿ ಸೆರೆಹೋಗುವರು.” ಇದು ಸರ್ವೇಶ್ವರಸ್ವಾಮಿಯ ನುಡಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India