ಆದಿಕಾಂಡ 32 - ಕನ್ನಡ ಸತ್ಯವೇದವು C.L. Bible (BSI)ಏಸಾವನ ಭೇಟಿಗೆ ಸಿದ್ಧತೆ 1 ಇತ್ತ ಯಕೋಬನು ತನ್ನ ಪ್ರಯಾಣವನ್ನು ಮುಂದುವರೆಸಿದನು. 2 ದೇವದೂತರು ಅವನೆದುರಿಗೆ ಬಂದರು. ಯಕೋಬನು ಅವರನ್ನು ನೋಡಿ, “ಇದು ದೇವರ ಪಾಳೆಯ,” ಏಂದು ಹೇಳಿ ಆ ಸ್ಥಳಕ್ಕೆ ‘ಮಹನಯಿಮ್’ ಎಂದು ಹೆಸರಿಟ್ಟನು. 3 ಬಳಿಕ ಯಕೋಬನು ಎದೋಮ್ಯರ ನಾಡಿನ ‘ಸೇಯೀರ್’ ಎಂಬಲ್ಲಿ ವಾಸವಾಗಿದ್ದ ತನ್ನ ಅಣ್ಣ ಏಸಾವನ ಬಳಿಗೆ ಮುಂದಾಳುಗಳನ್ನು ಕಳಿಸಿದನು. 4 ಕಳುಹಿಸುವಾಗ ಅವರಿಗೆ, “ನೀವು ನನ್ನೊಡೆಯ ಏಸಾವನ ಬಳಿಗೆ ಹೋಗಿ ಈ ಸಮಾಚಾರವನ್ನು ಕೊಡಿ: ‘ನಿಮ್ಮ ದಾಸ ಯಕೋಬನಾದ ನಾನು ಇಷ್ಟು ದಿನ ಲಾಬಾನನ ಬಳಿ ವಾಸಮಾಡಬೇಕಾಗಿ ಬಂದಿತು. 5 ನನಗೆ ಎತ್ತು - ಕತ್ತೆ, ಆಡು - ಕುರಿ, ದಾಸ - ದಾಸಿಯರು ಇದ್ದಾರೆ. ನನ್ನೊಡೆಯರಾದ ನೀವು ನನ್ನ ಬಗ್ಗೆ ದಯದಾಕ್ಷಿಣ್ಯವುಳ್ಳವರಾಗಿರಬೇಕೆಂಬ ಕೋರಿಕೆಯಿಂದ ನಮ್ಮನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ' ಎಂದು ತಿಳಿಸಿರಿ” ಎಂದನು. 6 ಆ ಆಳುಗಳು ಹೋಗಿ ಯಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿಮ್ಮ ಅಣ್ಣ ಏಸಾವನ ಬಳಿಗೆ ಹೋಗಿದ್ದೆವು. ಅವರು ನಾನೂರು ಜನರ ಸಮೇತ ನಿಮ್ಮನ್ನು ಎದುರುಗೊಳ್ಳಲು ಬರುತ್ತಿದ್ದಾರೆ,” ಎಂದು ತಿಳಿಸಿದರು. 7 ಆಗ ಯಕೋಬನು ಬಹಳ ದಿಗಿಲುಗೊಂಡನು, ಕಳವಳಗೊಂಡನು; ತನ್ನ ಜನರನ್ನೂ ಕುರಿ, ದನ, ಒಂಟೆಗಳನ್ನೂ ಎರಡು ಪರಿವಾರಗಳಾಗಿ ವಿಂಗಡಿಸಿದನು. 8 ಏಸಾವನು ಒಂದು ಪರಿವಾರದ ಮೇಲೆ ಬಿದ್ದರೆ ಇನ್ನೊಂದು ತಪ್ಪಿಸಿಕೊಳ್ಳಬಹುದೆಂಬುದು ಅವನ ಯೋಚನೆಯಾಗಿತ್ತು. 9 ಇದಲ್ಲದೆ ಯಕೋಬನು ದೇವರನ್ನು ಹೀಗೆಂದು ಪ್ರಾರ್ಥಿಸಿದನು: “ಸ್ವಾಮಿ ಸರ್ವೇಶ್ವರಾ, ನನ್ನ ತಂದೆ ತಾತಂದಿರಾದ ಇಸಾಕ, ಅಬ್ರಹಾಮರ ದೇವರೇ, ಸ್ವಂತ ನಾಡಿಗೆ, ಬಂಧುಬಳಗದವರ ಬಳಿಗೆ ಹಿಂದಿರುಗಬೇಕೆಂದು ನನಗೆ ನೀವೇ ಆಜ್ಞಾಪಿಸಿದಿರಿ: 'ನಿನಗೆ ಒಳ್ಳೆಯದನ್ನೇ ಮಾಡುತ್ತೇನೆ' ಎಂದು ವಾಗ್ದಾನ ಮಾಡಿದವರು ನೀವೇ ಅಲ್ಲವೆ? 10 ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿಮ್ಮ ವಾಗ್ದಾನವನ್ನು ನೆರವೇರಿಸಿದ್ದೀರಿ. ನಾನು ಅದಕ್ಕೆ ಕೇವಲ ಅಪಾತ್ರನು. ನಾನು ಮೊದಲು ಈ ಜೋರ್ಡನ್ ನದಿಯನ್ನು ದಾಟಿದಾಗ ನನಗಿದ್ದುದು ಒಂದು ಊರುಗೋಲು ಮಾತ್ರ. ಈಗ ಎರಡು ಪರಿವಾರಗಳಿಗೆ ಒಡೆಯನಾಗಿದ್ದೇನೆ. 11 ನನ್ನ ಅಣ್ಣ ಏಸಾವನು ಬಂದು ನನ್ನನ್ನೂ ನನ್ನ ಮಕ್ಕಳನ್ನೂ ಅವರ ತಾಯಂದಿರನ್ನೂ ಕೊಲ್ಲುವನೋ ಏನೋ ಎಂಬ ಭಯ ನನಗಿದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 12 ನಿನಗೆ ಒಳ್ಳೆಯದನ್ನೇ ಮಾಡಿ ನಿನ್ನ ಸಂತತಿಯನ್ನು ಎಣಿಸಲಾಗದ ಕಡಲತೀರದ ಮರಳಿನಂತೆ ಹೆಚ್ಚಿಸುವೆನು, ಎಂದು ಹೇಳಿದವರು ನೀವೇ ಅಲ್ಲವೇ?” 13-15 ಯಕೋಬನು ಆ ರಾತ್ರಿಯನ್ನು ಅಲ್ಲೇ ಕಳೆದನು. ಇನ್ನೂರು ಆಡು, ಇಪ್ಪತ್ತು ಹೋತ, ಇನ್ನೂರು ಕುರಿ, ಇಪ್ಪತ್ತು ಟಗರು, ಹಾಲು ಕರೆಯುವ ಮೂವತ್ತು ಒಂಟೆ ಮತ್ತು ಅವುಗಳ ಮರಿ, ನಲವತ್ತು ಆಕಳು, ಹತ್ತು ಹೋರಿ, ಇಪ್ಪತ್ತು ಹೆಣ್ಣುಕತ್ತೆ, ಹತ್ತು ಗಂಡುಕತ್ತೆ ಇವುಗಳನ್ನು ತನ್ನ ಅಣ್ಣ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. 16 ಇವುಗಳನ್ನು ಹಿಂಡುಹಿಂಡಾಗಿ ವಿಂಗಡಿಸಿ ತನ್ನ ಆಳುಗಳ ವಶಕ್ಕೆ ಒಪ್ಪಿಸಿದನು. “ನೀವು ನನಗಿಂತ ಮುಂಚಿತವಾಗಿ ಹೋಗಿರಿ; ಹಿಂಡು ಹಿಂಡಿಗೂ ಮಧ್ಯೆ ಸ್ಥಳವಿರಲಿ,” ಎಂದು ಆ ಆಳುಗಳಿಗೆ ಹೇಳಿದನು. 17 ಮೊದಲನೆಯ ಹಿಂಡಿನ ಆಳಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, “ನೀನು ಯಾರ ಆಳು? ಎಲ್ಲಿಗೆ ಹೋಗುತ್ತಿರುವೆ? ನಿನ್ನ ಮುಂದೆ ಇರುವ ಇವೆಲ್ಲ ಯಾರವು?” ಎಂದು ಕೇಳಿದರೆ ನೀನು, 18 ‘ಇವು ನಿಮ್ಮ ದಾಸ ಯಕೋಬನವು; ಒಡೆಯರಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳಿಸಿಕೊಟ್ಟಿದ್ದಾರೆ; ಅವರೂ ನಮ್ಮ ಹಿಂದೆ ಬರುತ್ತಿದ್ದಾರೆ’ ಎಂದು ಉತ್ತರಕೊಡಬೇಕು,” ಎಂಬುದಾಗಿ ಅಪ್ಪಣೆ ಕೊಟ್ಟನು. 19 ಹಾಗೆಯೇ ಎರಡನೆಯವನಿಗೂ ಮೂರನೆಯವನಿಗೂ ಹಿಂಡುಗಳ ಹಿಂದೆ ಹೋದವರೆಲ್ಲರಿಗೂ, “ನೀವು ಏಸಾವನನ್ನು ಕಾಣುವಾಗ ಇದೇ ರೀತಿಯಾಗಿ ಮಾತನಾಡಬೇಕು. 20 ‘ನಿಮ್ಮ ದಾಸ ಯಕೋಬನು ನಮ್ಮ ಹಿಂದೆ ಬರುತ್ತಿದ್ದಾರೆ,’ ಎನ್ನಿರಿ” ಎಂದು ಆಜ್ಞಾಪಿಸಿದನು. ಯಕೋಬನು ತನ್ನೊಳಗೆ, “ನನಗೆ ಮುಂಚಿತವಾಗಿ ಹೋಗುವ ಈ ಕಾಣಿಕೆಯಿಂದ ಏಸಾವನನ್ನು ಸಮಾಧಾನಪಡಿಸಿದ ಮೇಲೆ ನಾನು ಅವನನ್ನು ಭೇಟಿ ಆಗುತ್ತೇನೆ. ಆಗ ಒಂದು ವೇಳೆ ನನ್ನನ್ನು ಪ್ರೀತಿಯಿಂದ ಅಂಗೀಕರಿಸುವನು,” ಎಂದುಕೊಂಡನು. 21 ಆದಕಾರಣ ಅವನು ಆ ಕಾಣಿಕೆಯನ್ನು ಮುಂಚಿತವಾಗಿ ಕಳಿಸಿ, ತಾನು ಆ ರಾತ್ರಿ ಆ ತನ್ನ ಪಾಳೆಯದೊಳಗೇ ಇದ್ದನು. ದೇವದೂತನೊಡನೆ ಮಲ್ಲಯುದ್ಧ 22 ಆ ರಾತ್ರಿ ಯಕೋಬನು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ಹನ್ನೊಂದು ಮಂದಿ ಮಕ್ಕಳನ್ನೂ ಕರೆದುಕೊಂಡು ‘ಯಬ್ಬೋಕ್’ ಹೊಳೆಯನ್ನು ದಾಟುವ ಸ್ಥಳದಲ್ಲಿ ದಾಟಿದನು. 23 ಅವರನ್ನೂ ತನ್ನ ಆಸ್ತಿಪಾಸ್ತಿಯನ್ನೂ ದಾಟಿಸಿದ ಮೇಲೆ 24 ಯಕೋಬನು ಒಂಟಿಗನಾಗಿ ಹಿಂದೆ ನಿಂತಿದ್ದನು, ಯಾರೋ ಒಬ್ಬ ಪುರುಷ ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. 25 ಆ ಪುರುಷ ತಾನು ಗೆಲ್ಲದೆ ಇರುವುದನ್ನು ಕಂಡು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಹೋರಾಡುತ್ತಿರುವಾಗಲೆ ಯಕೋಬನ ತೊಡೆಯ ಕೀಲು ತಪ್ಪಿತು. 26 ಆ ಪುರುಷ, “ನನ್ನನ್ನು, ಹೋಗಬಿಡು, ಬೆಳಗು ಆಗುತ್ತಿದೆ,” ಎನ್ನಲು ಯಕೋಬನು, “ನೀವು ನನ್ನನ್ನು ಆಶೀರ್ವದಿಸಿದ ಹೊರತು, ನಿಮ್ಮನ್ನು ಹೋಗಬಿಡುವುದಿಲ್ಲ,” ಎಂದನು. 27 ಆ ಪುರುಷ, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಯಕೋಬನು, “ನನ್ನ ಹೆಸರು ಯಕೋಬ” ಎಂದನು. 28 ಅವನು ಯಕೋಬನಿಗೆ, “ಇನ್ನು ಮೇಲೆ ನೀನು ಯಕೋಬ ಎನಿಸಿಕೊಳ್ಳುವುದಿಲ್ಲ; ದೇವರ ಸಂಗಡ ಹಾಗು ಮನುಷ್ಯರ ಸಂಗಡ ಹೋರಾಡಿ ಗೆದ್ದವನಾದ್ದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರುಂಟಾಗುವುದು,” ಎಂದು ಹೇಳಿದನು. 29 ಯಕೋಬನು, “ನಿಮ್ಮ ಹೆಸರನ್ನು ದಯವಿಟ್ಟು ನನಗೆ ತಿಳಿಸಬೇಕು,” ಎಂದಾಗ ಆ ಪುರುಷ, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲೇ ಅವನನ್ನು ಆಶೀರ್ವದಿಸಿದನು. 30 ಯಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ಕಂಡಿದ್ದರೂ ಪ್ರಾಣಸಹಿತ ಉಳಿದಿದ್ದೇನಲ್ಲಾ!” ಎಂದುಕೊಂಡು ಆ ಸ್ಥಳಕ್ಕೆ ‘ಪೆನೀಯೇಲ್’ ಎಂದು ಹೆಸರಿಟ್ಟನು. 31 ಅವನು ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯ ಆಯಿತು; ಕೀಲು ಕಳಚಿದ ತೊಡೆಯ ನಿಮಿತ್ತ ಅವನು ಕುಂಟುಕೊಂಡೇ ನಡೆದನು. 32 ಆ ಪುರುಷನು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರೆಯೇಲರು ಇಂದಿನವರೆಗೂ ತೊಡೆಯ ಕೀಲಿನ ಮೇಲಿರುವ ಮಾಂಸವನ್ನು ತಿನ್ನುವುದಿಲ್ಲ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India