ಅರಣ್ಯಕಾಂಡ 25 - ಕನ್ನಡ ಸತ್ಯವೇದವು C.L. Bible (BSI)ಪೆಗೋರದಲ್ಲಿ ಇಸ್ರಯೇಲರು 1 ಇಸ್ರಯೇಲರು ಶಿಟ್ಟೀಮಿನಲ್ಲಿ ವಾಸಮಾಡುತ್ತಿದ್ದಾಗ ಮೋವಾಬ್ ಮಹಿಳೆಯರೊಡನೆ ಸಹವಾಸ ಮಾಡತೊಡಗಿದರು. 2 ಆ ಮಹಿಳೆಯರು ತಮ್ಮ ದೇವತೆಗಳಿಗೆ ಮಾಡಿದ ಬಲಿಔತಣಗಳಲ್ಲಿ ಭಾಗಿಗಳಾಗಲು ಇಸ್ರಯೇಲರನ್ನು ಆಹ್ವಾನಿಸುತ್ತಿದ್ದರು. ಇವರು ಪ್ರಸಾದ ಸ್ವೀಕರಿಸಿ ಆ ದೇವತೆಗಳಿಗೆ ತಲೆಬಾಗುತ್ತಿದ್ದರು. 3 ಹೀಗೆ ಇಸ್ರಯೇಲರು ಪೆಗೋರದ ‘ಬಾಳ್’ ದೇವತೆಯ ಭಕ್ತರಾದರು. ಇದರಿಂದ ಸರ್ವೇಶ್ವರ ಸ್ವಾಮಿ ಕೋಪಗೊಂಡರು. 4 ಮೋಶೆಗೆ, “ಈ ಜನರ ಮುಖಂಡರೆಲ್ಲರನ್ನು ಹಿಡಿಸಿ, ನನ್ನ ಆಜ್ಞಾನುಸಾರ ಬಹಿರಂಗವಾಗಿ ಮರಣದಂಡನೆಗೆ ಗುರಿಮಾಡಿಸು. ಆಗ ನನ್ನ ಕೋಪಾಗ್ನಿ ಇಸ್ರಯೇಲರಿಂದ ತೊಲಗುವುದು,” ಎಂದರು. 5 ಅಂತೆಯೇ ಮೋಶೆ ಇಸ್ರಯೇಲರ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಪ್ರತಿಯೊಬ್ಬನು ಪೆಗೋರದ ಬಾಳ್ ದೇವತೆಗೆ ಪೂಜಿಸುವ ತನ್ನ ತನ್ನ ವಂಶದವರಿಗೆ ಪ್ರಾಣಶಿಕ್ಷೆಯನ್ನು ವಿಧಿಸಬೇಕು,” ಎಂದು ಆಜ್ಞಾಪಿಸಿದನು. ಫೀನೆಹಾಸನು 6 ಇಸ್ರಯೇಲರ ಸರ್ವಸಮುದಾಯದವರು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ವಿಲಾಪಿಸುತ್ತಿದ್ದರು. ಇಸ್ರಯೇಲನಾದ ಒಬ್ಬ ವ್ಯಕ್ತಿ ಮೋಶೆಗೂ ಸರ್ವಸಮೂಹದವರಿಗೂ ಕಾಣುವಂತೆ ಒಬ್ಬ ಮಿದ್ಯಾನ್ ಮಹಿಳೆಯನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋದನು. 7 ಕೂಡಲೆ ಮಹಾಯಾಜಕ ಆರೋನನ ಮೊಮ್ಮಗನೂ ಹಾಗು ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ಕೈಗೆ ತೆಗೆದುಕೊಂಡನು. 8 ಆ ಇಸ್ರಯೇಲ ವ್ಯಕ್ತಿಯ ಹಿಂದೆಯೇ ಹೋಗಿ, ಅವನ ಒಳಕೋಣೆಯನ್ನು ಹೊಕ್ಕು ಅವರಿಬ್ಬರನ್ನು, ಅಂದರೆ ಆ ಇಸ್ರಯೇಲನನ್ನು ಮತ್ತು ಆ ಮಹಿಳೆಯನ್ನು ಒಂದೇ ಬಾರಿಗೆ ಹೊಟ್ಟೆಯಲ್ಲಿ ತಿವಿದುಕೊಂದನು. ಹೀಗೆ ಇಸ್ರಯೇಲರಿಗೆ ಒದಗಿದ್ದ ಜಾಡ್ಯ ನಿಂತುಹೋಯಿತು. 9 ಇಪ್ಪತ್ತನಾಲ್ಕು ಸಾವಿರ ಮಂದಿ ಈಗಾಗಲೇ ಈ ಜಾಡ್ಯದಿಂದ ಸತ್ತಿದ್ದರು. 10 ಸರ್ವೇಶ್ವರ ಮೋಶೆಗೆ ಹೀಗೆಂದರು: 11 “ಮಹಾಯಾಜಕ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಇಸ್ರಯೇಲರ ಮೇಲೆ ನನಗಿದ್ದ ಕೋಪವನ್ನು ತೊಲಗಿಸಿದ್ದಾನೆ. ನನ್ನ ಬಗ್ಗೆ ಅವನೊಬ್ಬನೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ. ನನ್ನ ಗೌರವವನ್ನು ಕಾಪಾಡಿಕೊಳ್ಳಲು ಇನ್ನು ಇಸ್ರಯೇಲರನ್ನು ನಿರ್ಮೂಲ ಮಾಡಬೇಕಾದ ಅಗತ್ಯವಿಲ್ಲ. 12 ಆದಕಾರಣ ನಾನು ಅವನ ಸಂಗಡ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳುತ್ತೇನೆಂದು ತಿಳಿಸು. 13 ಆ ಒಪ್ಪಂದವೇನೆಂದರೆ ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ವಾಗ್ದಾನ ಮಾಡುತ್ತೇನೆ. ಅವನು ತನ್ನ ದೇವರ ಗೌರವದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾನೆ; ಇಸ್ರಯೇಲರ ದೋಷಕ್ಕಾಗಿ ಪ್ರಾಯಶ್ಚಿತ್ತ ಮಾಡಿದ್ದಾನೆ. ಆದ್ದರಿಂದ ಅವನಿಗೇ ಈ ವಾಗ್ದಾನ ಮಾಡಿದ್ದೇನೆ.” 14 ಆ ಮಿದ್ಯಾನ್ ಮಹಿಳೆಯೊಡನೆ ಹತನಾದವನ ಹೆಸರು ಜಿಮ್ರೀ. ಅವನು ಸಿಮೆಯೋನ್ ಕುಲದವರಲ್ಲಿ ಗೋತ್ರ ನಾಯಕನಾದ ಸಾಲೂ ಎಂಬವನ ಮಗ. 15 ಹತಳಾದ ಮಿದ್ಯಾನ್ ಮಹಿಳೆಯ ಹೆಸರು ಕೊಜ್ಜೀ. ಅವಳು ಮಿದ್ಯಾನ್ಯರಲ್ಲಿ ಗೋತ್ರನಾಯಕನಾದ ಚೂರ್ ಎಂಬವನ ಮಗಳು. 16 ಅನಂತರ ಸರ್ವೇಶ್ವರ ಮೋಶೆಗೆ: 17 “ನೀನು ದಾಳಿಮಾಡಿ ಮಿದ್ಯಾನ್ಯರನ್ನು ಹಾಳುಮಾಡು. 18 ಅವರು ಪೆಗೋರದಲ್ಲಿ ನಡೆದ ಘಟನೆಗಳಲ್ಲೂ ತಮ್ಮ ನಾಯಕನ ಮಗಳಾದ ಕೊಜ್ಜೀ ಎಂಬ ಸ್ವಕುಲಸ್ತ್ರೀಯ ವಿಷಯದಲ್ಲೂ ನಿಮ್ಮನ್ನು ಮೋಸಗೊಳಿಸಿದ್ದಾರೆ. ನಿಮಗೆ ಕೇಡುಮಾಡಿದ್ದಾರೆ,” ಎಂದರು. ಆ ಮಹಿಳೆ ಹತಳಾದುದು ಪೆಗೋರದ ಘಟನೆಗಳ ನಿಮಿತ್ತ ದೊಡ್ಡ ರೋಗ ಬಂದಾಗ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India