Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 17 - ಕನ್ನಡ ಸತ್ಯವೇದವು C.L. Bible (BSI)


ಅಹೀತೋಫೆಲನ ಆಲೋಚನೆಯನ್ನು ನಿರರ್ಥಕಪಡಿಸಿದ ಹೂಷೈ

1 ತರುವಾಯ ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾಗಲಿ, ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು;

2 ಅವನು ದಣಿದವನೂ ಧೈರ್ಯಗುಂದಿದವನೂ ಆಗಿರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು; ಅವನ ಜನರೆಲ್ಲರೂ ಓಡಿಹೋಗುವರು.

3 ಅರಸನೊಬ್ಬನನ್ನೇ ಕೊಂದು ಎಲ್ಲಾ ಜನರನ್ನು ತಿರುಗಿ ನಿಮ್ಮ ಬಳಿಗೆ ಬರಮಾಡುವೆನು. ನಿಮ್ಮ ಅಪೇಕ್ಷೆಯಂತೆ ಎಲ್ಲಾ ಜನರೂ ಹಿಂದಿರುಗಿ ಬಂದ ಮೇಲೆ ನಾಡಿನಲ್ಲಿ ಎಲ್ಲಾ ಸಮಾಧಾನವುಂಟಾಗುವುದು,” ಎಂದು ಹೇಳಿದನು.

4 ಈ ಸಲಹೆ ಅಬ್ಷಾಲೋಮನಿಗೂ ಇಸ್ರಯೇಲರ ಹಿರಿಯರೆಲ್ಲರಿಗೂ ಸರಿಯಾಗಿ ಕಂಡಿತು.

5 ಆಮೇಲೆ ಅಬ್ಷಾಲೋಮನು, “‍ಅರ್ಕೀಯನಾದ ಹೂಷೈಯನ್ನು ಕರೆದು ಅವನ ಅಭಿಪ್ರಾಯವನ್ನೂ ಕೇಳೋಣ,” ಎಂದುಕೊಂಡನು.

6 ಅವನು ತನ್ನ ಬಳಿಗೆ ಬಂದಾಗ, “ಅಹೀತೋಫೆಲನು ಹೀಗೆ ಹೀಗೆ ಹೇಳಿದ್ದಾನೆ; ಇದರಂತೆ ಮಾಡಿದರೆ ಒಳ್ಳೇದಾಗುವುದೇ? ಇಲ್ಲವಾದರೆ ನಿನ್ನ ಅಭಿಪ್ರಾಯ ಏನು?” ಎಂದು ಕೇಳಿದನು.

7 ಆಗ ಹೂಷೈಯು ಅಬ್ಷಾಲೋಮನಿಗೆ, “ಈ ಸಾರಿ ಅಹೀತೋಫೆಲನು ಹೇಳಿದ ಆಲೋಚನೆ ಒಳ್ಳೆಯದಲ್ಲ;

8 ತಮ್ಮ ತಂದೆ ಮತ್ತು ಅವನ ಜನರೂ ಶೂರರಾಗಿದ್ದಾರೆಂದೂ, ಈಗಲಾದರೋ ಅವರು ಮರಿಯನ್ನು ಕಳೆದುಕೊಂಡ ಕರಡಿಯಂತೆ ರೋಷ ಉಳ್ಳವರಾಗಿದ್ದಾರೆಂದೂ ತಮಗೆ ಗೊತ್ತುಂಟಲ್ಲವೆ? ಇದಲ್ಲದೆ ತಮ್ಮ ತಂದೆ ಯುದ್ಧ ನಿಪುಣನು; ಜನರ ಮಧ್ಯದಲ್ಲಿ ರಾತ್ರಿ ಕಳೆಯುವುದಿಲ್ಲ.

9 ಅವನು ಈಗ ಒಂದು ಗುಹೆಯಲ್ಲೋ ಬೇರೆ ಯಾವುದಾದರೊಂದು ಸ್ಥಳದಲ್ಲಾಗಲೋ ಅಡಗಿಕೊಂಡಿರುವನು. ಮೊದಲು ನಮ್ಮವರಲ್ಲೇ ಕೆಲವರು ಮಡಿದರೆ, ಜನರು ಇದನ್ನು ಕೇಳಿ, ಅಬ್ಷಾಲೋಮನ ಪಕ್ಷದವರಿಗೆ ಮಹಾ ಅಪಜಯವಾಯಿತೆಂದು ಸುದ್ದಿಹಬ್ಬಿಸುವರು.

10 ಆಗ ಸಿಂಹಹೃದಯಿಗಳಾದ ಶೂರರ ಎದೆಯೂ ಕರಗಿ ನೀರಾಗುವುದು. ನಿಮ್ಮ ತಂದೆ ರಣವೀರನೆಂದೂ ಅವನ ಸಂಗಡ ಇದ್ದವರು ಪರಾಕ್ರಮಶಾಲಿಗಳೆಂದೂ ಎಲ್ಲಾ ಇಸ್ರಯೇಲರು ಬಲ್ಲರಷ್ಟೆ.

11 ಹೀಗಿರುವುದರಿಂದ, ನನ್ನ ಆಲೋಚನೆಯನ್ನು ಕೇಳಿ: “ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿರುವ ಇಸ್ರಯೇಲರಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ಕೂಡಿಸಿ ನೀವೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.

12 ನಾವು ಅವನಿರುವ ಸ್ಥಳವನ್ನು ಗೊತ್ತುಮಾಡಿಕೊಂಡು ಹೋಗಿ ನೆಲದ ಮೇಲೆ ಇಬ್ಬನಿ ಹೇಗೋ ಹಾಗೆಯೇ ಅವರ ಮೇಲೆ ಎರಗೋಣ. ಆಗ ಅವನೂ ಅವನ ಜನರೂ ನಮ್ಮ ಕೈಗೆ ಸಿಕ್ಕುವರು; ಒಬ್ಬನೂ ತಪ್ಪಿಸಿಕೊಳ್ಳಲಾರನು.

13 ಅವನು ಒಂದು ಪಟ್ಟಣವನ್ನು ಹೊಕ್ಕಿರುವುದು ಆದರೆ ಇಸ್ರಯೇಲರೆಲ್ಲರೂ ಹಗ್ಗಗಳನ್ನು ತೆಗೆದುಕೊಂಡು ಅಲ್ಲಿಗೆ ಬರಲಿ; ಆಗ ಆ ಊರನ್ನು ಒಂದು ಹರಳಾದರೂ ಉಳಿಯದಂತೆ ಹಗ್ಗಗಳಿಂದ ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು.

14 ಇದನ್ನು ಕೇಳಿ ಅಬ್ಷಾಲೋಮನೂ ಎಲ್ಲ ಇಸ್ರಯೇಲರೂ, “ಅರ್ಕಿಯನಾದ ಹೂಷೈಯ ಆಲೋಚನೆಯು ಅಹೀತೋಫೆಲನ ಆಲೋಚನೆಗಿಂತ ಒಳ್ಳೆಯದಾಗಿದೆ,” ಎಂದರು. ಹೀಗೆ ಸರ್ವೇಶ್ವರ ಅಬ್ಷಾಲೋಮನಿಗೆ ಕೇಡನ್ನುಂಟುಮಾಡಬೇಕೆಂದು, ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಿದರು.


ದಾವೀದನಿಗೆ ಎಚ್ಚರಿಕೆ - ಪಲಾಯನ

15 ತರುವಾಯ ಹೂಷೈಯು, ಯಾಜಕರಾದ ಚಾದೋಕ ಹಾಗು ಎಬ್ಯಾತಾರರಿಗೆ, “ಅಹೀತೋಫೆಲನು ಅಬ್ಷಾಲೋಮನಿಗೂ ಇಸ್ರಯೇಲರ ಹಿರಿಯರಿಗೂ ಇಂಥಿಂಥ ಆಲೋಚನೆಯನ್ನು ಹೇಳಿದನು; ನಾನು ಹೀಗೆ ಹೇಳಿದೆ.

16 ಆದುದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಿಬಿಡಿ; ಇಲ್ಲವಾದರೆ ನೀವೂ ನಿಮ್ಮ ಜನರೂ ನಾಶವಾಗುವಿರಿ’ ಎಂದು ಹೇಳಿ ಕಳುಹಿಸಿರಿ,” ಎಂದನು.

17 ಯೋನಾತಾನ್ ಹಾಗು ಅಹೀಮಾಚರು ರೋಗೆಲಿನ ಬುಗ್ಗೆಯ ಬಳಿಯಲ್ಲಿದ್ದರು. ಇವರ ಮನೆಯ ದಾಸಿ ಎಲ್ಲಾ ವರ್ತಮಾನಗಳನ್ನು ಇವರಿಗೂ ಇವರ ಅರಸ ದಾವೀದನಿಗೂ ಮುಟ್ಟಿಸುವಂತೆ ಗೊತ್ತುಮಾಡಿಕೊಂಡಿದ್ದರು. ತಮ್ಮನ್ನು ಯಾರೂ ನೋಡಬಾರದೆಂದು ಇವರು ತಾವಾಗಿ ಊರೊಳಗೆ ಬರಲಿಲ್ಲ.

18 ಆದರೂ ಒಬ್ಬ ಯುವಕನು ಅವರನ್ನು ನೋಡಿ ಅಬ್ಷಾಲೋಮನಿಗೆ ತಿಳಿಸಿದನು. ಅಷ್ಟರಲ್ಲಿ ಅವರಿಬ್ಬರೂ ಬಹುರೀಮಿಗೆ ಓಡಿಹೋಗಿ ಅಲ್ಲಿ ಒಬ್ಬನ ಮನೆಯನ್ನು ಹೊಕ್ಕರು. ಆ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಅವರು ಅದರಲ್ಲಿ ಇಳಿದರು.

19 ಕೂಡಲೆ ಆ ಮನೆಯ ಹೆಂಗಸು ಅದರ ಮೇಲೆ ಒಂದು ಬಟ್ಟೆಯನ್ನು ಹಾಸಿ ಗೋದಿಯ ನುಚ್ಚನ್ನು ಹರವಿದಳು. ಆದುದರಿಂದ ಅವರಿರುವ ಸಂಗತಿ ಯಾರಿಗೂ ಗೊತ್ತಾಗಲಿಲ್ಲ.

20 ಅಬ್ಷಾಲೋಮನ ಸೇವಕರು ಆ ಸ್ತ್ರೀಯ ಮನೆಗೆ ಹೋಗಿ, “ಅಹೀಮಾಚ್ ಮತ್ತು ಯೋನಾತಾನರೆಲ್ಲಿ?” ಎಂದು ಆಕೆಯನ್ನು ಕೇಳಿದ್ದಕ್ಕೆ ಆಕೆ, ” ಅವರು ಹಳ್ಳದಾಟಿ ಹೋಗಿಬಿಟ್ಟರು,” ಎಂದು ಉತ್ತರಕೊಟ್ಟಳು. ಸೇವಕರು ಅವರನ್ನು ಹುಡುಕುವುದಕ್ಕೆ ಹೋಗಿ ಕಾಣದೆ ಜೆರುಸಲೇಮಿಗೆ ಹಿಂದಿರುಗಿದರು.

21 ಅವರು ಹೋದಕೂಡಲೆ ಇವರಿಬ್ಬರೂ ಬಾವಿಯಿಂದ ಮೇಲಕ್ಕೆ ಬಂದು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, “ಅಹೀತೋಫೆಲನು ನಿಮಗೆ ವಿರೋಧವಾಗಿ ಇಂಥಿಂಥ ಆಲೋಚನೆಯನ್ನು ಹೇಳಿದ್ದಾನೆ; ಆದುದರಿಂದ ಬೇಗನೆ ಎದ್ದು ನದಿದಾಟಿ ಹೋಗಿ,” ಎಂದು ಹೇಳಿದರು.

22 ಆಗ ದಾವೀದನೂ ಅವನ ಜೊತೆಯಲ್ಲಿದ್ದವರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. ಉದಯವಾದಾಗ ದಾಟಬೇಕಾದವನೊಬ್ಬನೂ ಇರಲಿಲ್ಲ.

23 ಅಹೀತೋಫೆಲನು ತನ್ನ ಆಲೋಚನೆ ನಡೆಯಲಿಲ್ಲವೆಂದು ತಿಳಿದು, ಕತ್ತೆಗೆ ತಡಿಹಾಕಿಸಿ ಕುಳಿತುಕೊಂಡು ತನ್ನ ಊರಿಗೆ ಹೋಗಿದ್ದನು. ಮನೆಯ ವ್ಯವಸ್ಥೆಮಾಡಿ ಅನಂತರ ಉರ್ಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.


ದಾವೀದನ ಪ್ರಯಾಣ; ಅವನಿಗೆ ದೊರೆತ ಆದರಣೆ

24 ದಾವೀದನು ಮಹನಯಿಮಿಗೆ ಹೋದನು. ಇಸ್ರಯೇಲರನ್ನೆಲ್ಲಾ ಕೂಡಿಸಿಕೊಂಡು ಅಬ್ಷಾಲೋಮನು ಜೋರ್ಡನ್ ನದಿ ದಾಟಿದನು.

25 ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಪತಿಯನ್ನಾಗಿ ನೇಮಿಸಿದನು. ಇಸ್ರಯೇಲನಾದ ಇತ್ರನು ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗಲ್ ಎಂಬುವಳನ್ನು ಕೂಡಿದ್ದರಿಂದ ಹುಟ್ಟಿದವನು ಈ ಅಮಾಸನು.

26 ಇಸ್ರಯೇಲರೂ ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ಪಾಳೆಯಮಾಡಿಕೊಂಡರು.

27 ದಾವೀದನು ಮಹನಯಿಮಿಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬವರು

28 ದಾವೀದನಿಗೂ ಅವನ ಜನರಿಗೂ ಹಾಸಿಗೆ, ಬಟ್ಟಲು, ಮಡಕೆ ಇವುಗಳನ್ನು ಕೊಟ್ಟರು; ಊಟಕ್ಕಾಗಿ ಗೋದಿ, ಜವೆಗೋದಿ ಹಿಟ್ಟು, ಹುರಿಗಾಳು,

29 ಅವರೆ, ಅಲಸಂದೆ, ಬೇಳೆ, ಜೇನುತುಪ್ಪ, ಬೆಣ್ಣೆ, ಕುರಿಗಿಣ್ಣು, ಹಸುವಿನ ಗಿಣ್ಣು, ಇವುಗಳನ್ನೂ ತಂದುಕೊಟ್ಟರು. ‘ಜನರು ಮರಳುಗಾಡಿನ ಪ್ರಯಾಣದಿಂದ ಹಸಿದಿದ್ದಾರೆ, ದಣಿದಿದ್ದಾರೆ ಹಾಗು ಬಾಯಾರಿದ್ದಾರೆ’ ಎಂಬ ಭಾವನೆಯಿಂದ ಇವುಗಳನ್ನು ತಂದುಕೊಟ್ಟರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು