Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 13 - ಕನ್ನಡ ಸತ್ಯವೇದವು C.L. Bible (BSI)


ಅಮ್ನೋನನು ಮತ್ತು ತಾಮಾರಳು

1 ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಬಹು ಚೆಲುವೆಯಾದ ತಂಗಿಯಿದ್ದಳು. ದಾವೀದನ ಮಗ ಅಮ್ನೋನನು ಆಕೆಯನ್ನು ಮೋಹಿಸಿದನು.

2 ಅವನು ಆಕೆಯ ಮೇಲಿನ ಮೋಹದಿಂದ ಪೀಡಿತನಾಗಿ ಅಸ್ವಸ್ಥನಾದನು. ಆಕೆ ಕನ್ಯೆ ಆಗಿದ್ದುದರಿಂದ ಆಕೆಗೆ ಏನು ಮಾಡುವುದೂ ಅಸಾಧ್ಯವೆಂದು ಅಮ್ನೋನನಿಗೆ ಕಂಡಿತು.

3 ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗ ಹಾಗು ಬಹು ಯುಕ್ತಿವಂತ.

4 ಅವನು ಒಂದು ದಿನ ಅಮ್ನೋನನನ್ನು, “ರಾಜಪುತ್ರರೇ, ನೀವು ದಿನೇದಿನೇ ಕ್ಷೀಣವಾಗುತ್ತಾ ಬರುವುದೇಕೆ? ನನಗೆ ತಿಳಿಸಬಾರದೇ?,” ಎಂದು ಕೇಳಿದನು. ಅವನು, “ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹವುಂಟಾಗಿದೆ,” ಎಂದು ಉತ್ತರಕೊಟ್ಟನು.

5 ಆಗ ಯೋನಾದಾಬನು, “ನೀನು ಅಸ್ವಸ್ಥನಾದವನಂತೆ ನಟಿಸಿ ಹಾಸಿಗೆಯ ಮೇಲೆ ಮಲಗಿಕೋ; ನಿನ್ನ ತಂದೆ ನಿನ್ನನ್ನು ನೋಡುವುದಕ್ಕೆ ಬಂದಾಗ, ‘ದಯವಿಟ್ಟು ನನ್ನ ತಂಗಿ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವುದಕ್ಕೆ ಕಳುಹಿಸಿ. ಆಕೆ ನನ್ನೆದುರಿನಲ್ಲೇ ಸಿದ್ಧಮಾಡಿಕೊಡುವುದಾದರೆ ಊಟಮಾಡುತ್ತೇನೆ’ ಎಂದು ಹೇಳು,” ಎಂದನು.

6 ಅಮ್ನೋನನು ಅಸ್ವಸ್ಥನಾದವನೋ ಎಂಬಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವುದಕ್ಕೆ ಬಂದಾಗ ಅವನು ಅರಸನಿಗೆ, “ದಯವಿಟ್ಟು ನನ್ನ ತಂಗಿ ತಾಮಾರಳನ್ನು ನನ್ನ ಬಳಿಗೆ ಕಳುಹಿಸಿ; ಆಕೆ ನನ್ನ ಕಣ್ಮುಂದೆಯೇ ಒಂದೆರಡು ಭಕ್ಷ್ಯಗಳನ್ನು ಮಾಡಿಕೊಡುವುದಾದರೆ ಊಟಮಾಡುತ್ತೇನೆ,” ಎಂದು ಬೇಡಿಕೊಂಡನು.

7 ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ, “ನೀನು ನಿನ್ನ ಅಣ್ಣ ಅಮ್ನೋನನ ಮನೆಗೆ ಹೋಗಿ ಅವನಿಗಾಗಿ ಆಹಾರವನ್ನು ಸಿದ್ಧಮಾಡು,” ಎಂದು ಹೇಳಿಸಿದನು.

8 ಕೂಡಲೆ ಆಕೆ ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು; ಅವನು ಮಲಗಿದ್ದನು. ಆಕೆ ಹೋಗಿ ಹಿಟ್ಟು ತೆಗೆದುಕೊಂಡು ನಾದಿ ಅವನ ಕಣ್ಮುಂದೆಯೇ ಭಕ್ಷ್ಯಗಳನ್ನು ಮಾಡಿ ಸುಟ್ಟಳು.

9 ಅನಂತರ ಆಕೆ ಅವುಗಳನ್ನು ಬಾಣಲಿಯಿಂದ ತೆಗೆದು ಅವನ ಮುಂದಿಟ್ಟಳು. ಅವನು ಊಟಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು.

10 ಎಲ್ಲರೂ ಹೋದಮೇಲೆ ಅವನು ತಾಮಾರಳಿಗೆ, “ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ, ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ!” ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮುಂದಿಟ್ಟಳು.

11 ಕೂಡಲೇ ಅವನು ಆಕೆಯನ್ನು ಹಿಡಿದು, “ನನ್ನ ತಂಗೀ, ಬಂದು ನನ್ನ ಸಂಗಡ ಮಲಗಿಕೋ,” ಎಂದನು.

12 ಆಕೆ, “ಅಣ್ಣಾ, ಬೇಡ; ನನ್ನನ್ನು ಕೆಡಿಸಬೇಡ; ಇಸ್ರಯೇಲರಲ್ಲಿ ಇಂಥದು ನಡೆಯಬಾರದು.

13 ಇಂಥ ಹುಚ್ಚುತನ ಬೇಡ, ಈ ಅವಮಾನವನ್ನು ಮರೆಮಾಡುವುದು ಹೇಗೆ? ನಿನಗಂತೂ ಇಸ್ರಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು,” ಎಂದಳು.

14 ಆದರೆ ಅವನು ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.

15 ಇದಾದ ಮೇಲೆ ಅವನಿಗೆ ಆಕೆಯಲ್ಲಿ ತುಂಬಾ ದ್ವೇಷ ಹುಟ್ಟಿತು. ಅವನ ಮುಂಚಿನ ಪ್ರೀತಿಗಿಂತ ದ್ವೇಷವೇ ಹೆಚ್ಚಾಯಿತು.

16 ಅಮ್ನೋನನು ಆಕೆಗೆ, “ಎದ್ದುಹೋಗು,” ಎಂದು ಹೇಳಿದಾಗ ಆಕೆ, “ಹಾಗೆ ಮಾಡಬೇಡ, ನನ್ನನ್ನು ಹೊರಡಿಸಿಬಿಡುವುದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ,” ಎಂದಳು.

17 ಆದರೆ ಅವನು ಆಕೆಯ ಮಾತನ್ನು ಕೇಳದೆ ಯಾವಾಗಲೂ ತನ್ನ ಹತ್ತಿರವೇ ಇರುವಂಥ ಆಳನ್ನು ಕರೆದು ಅವನಿಗೆ, “ಇವಳನ್ನು ಹೊರಗೆ ತಳ್ಳಿ ಕದಮುಚ್ಚು,” ಎಂದು ಆಜ್ಞಾಪಿಸಿದನು.

18 (ಆಕೆ ನಾನಾ ವರ್ಣಗಳುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಅದೇ ತರದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು.) ಸೇವಕನು ಆಕೆಯನ್ನು ಹೊರಗೆ ಕಳುಹಿಸಿ ಕದಮುಚ್ಚಿದನು.

19 ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು, ನಿಲುವಂಗಿಯನ್ನು ಹರಿದುಕೊಂಡು, ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.

20 ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, “ನಿನ್ನ ಅಣ್ಣ ಅಮ್ನೋನನು ನಿನ್ನ ಮಾನಭಂಗ ಮಾಡಿದನೇ? ನನ್ನ ತಂಗೀ, ತಕ್ಷಣಕ್ಕೆ ಸುಮ್ಮನಿರು; ಅವನು ನಿನ್ನ ಅಣ್ಣನಲ್ಲವೇ? ಈ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ,” ಎಂದು ಹೇಳಿದನು. ತಾಮಾರಳು ಒಂಟಿಗಳಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಿಸಿದಳು.

21 ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು.

22 ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೇಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.


ಅಬ್ಷಾಲೋಮನ ಸೇಡು

23 ಎರಡು ವರ್ಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಯಿಮನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವ ವ್ಯವಸ್ಥೆಮಾಡಿದನು. ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಆಮಂತ್ರಿಸಿದನು.

24 ಅವನು ಅರಸನ ಬಳಿಗೂ ಹೋಗಿ, “ಅರಸರೇ, ತಮ್ಮ ಸೇವಕನಾದ ನಾನು ಕುರಿಗಳ ಉಣ್ಣೆಕತ್ತರಿಸುವವರನ್ನು ಕರೆಸಿದ್ದೇನೆ. ಅರಸನು ತಮ್ಮ ಸೇವಕರ ಸಮೇತ ಅಲ್ಲಿಗೆ ಚಿತ್ತೈಸೋಣವಾಗಲಿ,” ಎಂದು ಬೇಡಿಕೊಂಡನು.

25 ಅರಸನು, “ಮಗನೇ, ಬೇಡ; ನಾವೆಲ್ಲರೂ ಬಂದರೆ ನಿನಗೆ ಕಷ್ಟವಾಗುವುದು,” ಎನ್ನಲು ಅಬ್ಷಾಲೋಮನು ಅವನನ್ನು ಬಹಳವಾಗಿ ಒತ್ತಾಯಪಡಿಸಿದನು. ಆದರೂ ಅರಸನು ಒಪ್ಪಲಿಲ್ಲ; ಅವನನ್ನು ಆಶೀರ್ವದಿಸಿದನು, ಅಷ್ಟೇ.

26 ಆಗ ಅಬ್ಷಾಲೋಮನು, “ನೀವು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ನನ್ನೊಡನೆ ಕಳುಹಿಸಿ,” ಎಂದನು. ಅದಕ್ಕೆ ಅರಸನು, “ಅವನೇಕೆ ನಿನ್ನ ಸಂಗಡ ಬರಬೇಕು?” ಎಂದು ಕೇಳಿದನು.

27 ಆದರೂ ಅಬ್ಷಾಲೋಮನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅರಸನು ಅಮ್ನೋನನನ್ನೂ ತನ್ನ ಬೇರೆ ಎಲ್ಲಾ ಮಕ್ಕಳನ್ನೂ ಕಳುಹಿಸಿದನು.

28 ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದಕೂಡಲೆ ಅವನನ್ನು ಹೊಡೆದು ಕೊಂದುಹಾಕಿ; ಹೆದರಬೇಡಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೆ? ಧೈರ್ಯದಿಂದಿರಿ, ಶೂರರಾಗಿರಿ,” ಎಂದು ಹೇಳಿದ್ದನು.

29 ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.

30 ಅವರು ಇನ್ನೂ ಮಾರ್ಗದಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ರಾಜಪುತ್ರರೆಲ್ಲರನ್ನೂ ಕೊಂದುಹಾಕಿದನು. ಒಬ್ಬನನ್ನೂ ಉಳಿಸಲಿಲ್ಲ,” ಎಂಬ ಸುದ್ದಿ ಮುಟ್ಟಿತು.

31 ಆಗ ಅರಸನು ದುಃಖತಾಳಲಾರದೆ ತನ್ನ ಬಟ್ಟೆಗಳನ್ನು ಹರಿದುಕೊಂಡು ನೆಲಕ್ಕೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅವನ ಹತ್ತಿರ ನಿಂತರು.

32 ಆಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜಪುತ್ರರೆಲ್ಲರನ್ನೂ ಕೊಂದುಹಾಕಿದ್ದಾರೆಂದು ನನ್ನ ಒಡೆಯರು ನೆನೆಸದಿರಲಿ. ಅಮ್ನೋನನೊಬ್ಬನೇ ಸತ್ತಿರಬೇಕು. ಅವನು ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಕೆಡಿಸಿದಾಗಿನಿಂದಲೇ ಹೀಗಾಗುವುದೆಂದು ಅಬ್ಷಾಲೋಮನ ಮುಖದಿಂದ ತೋರುತ್ತಿತ್ತು.

33 ಆದುದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸರು ಲಕ್ಷ್ಯಕೊಡದಿರಲಿ; ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ,” ಎಂದು ಹೇಳಿ ಸಂತೈಸಿದನು.

34 (ಅಬ್ಷಾಲೋಮನು ತಲೆ ತಪ್ಪಿಸಿಕೊಂಡನು.) ಅಷ್ಟರಲ್ಲಿ ದಾರಿ ನೋಡುತ್ತಿದ್ದ ಕಾವಲುಗಾರನು ಒಂದು ದೊಡ್ಡ ಗುಂಪು ಹೋರೋನಿನ ಮಾರ್ಗವಾಗಿ ಗುಡ್ಡ ಇಳಿದುಬರುವುದನ್ನು ಕಂಡನು.

35 ಯೋನಾದಾಬನು ಅರಸನಿಗೆ, “ಇಗೋ, ರಾಜಕುಮಾರರು ಬರುತ್ತಿದ್ದಾರೆ; ನಿಮ್ಮ ಸೇವಕನ ಮಾತಿನಂತೆಯೇ ಆಯಿತಲ್ಲವೇ,” ಎಂದು ಹೇಳಿ ಮುಗಿಸುವಷ್ಟರಲ್ಲೇ

36 ರಾಜಕುಮಾರರು ಬಂದು ಗಟ್ಟಿಯಾಗಿ ಅಳತೊಡಗಿದರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.

37-38 ದಾವೀದನು ತನ್ನ ಮಗನಿಗೋಸ್ಕರ ನಿತ್ಯವೂ ದುಃಖಪಡುತ್ತಿದ್ದನು. ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ ಓಡಿಹೋಗಿ ಅಲ್ಲಿನ ಅರಸನೂ ಅಮ್ಮೀಹೂದನ ಮಗನೂ ಆದ ತಲ್ಮೈಯ ಬಳಿಯಲ್ಲಿ ಮೂರು ವರ್ಷ ಇದ್ದನು.

39 ಅರಸ ದಾವೀದನು, ಅಮ್ನೋನನ ಸಾವಿನ ದುಃಖ ಶಮನವಾದ ಮೇಲೆ ತನ್ನ ಮಗ ಅಬ್ಷಾಲೋಮನನ್ನು ನೋಡಲು ಹಾತೊರೆಯತೊಡಗಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು