Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 10 - ಕನ್ನಡ ಸತ್ಯವೇದವು C.L. Bible (BSI)


ರೆಹಬ್ಬಾಮನ ವಿರುದ್ಧ ಉತ್ತರಪ್ರಾಂತ್ಯಗಳ ದಂಗೆ
( ೧ ಅರಸು. 12:1-20 )

1 ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಇಸ್ರಯೇಲರೆಲ್ಲರು ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಕೂಡಿಬಂದಿದ್ದರು.

2 ಇತ್ತ ಅರಸ ಸೊಲೊಮೋನನಿಗೆ ತಪ್ಪಿಸಿಕೊಂಡು ಈಜಿಪ್ಟಿಗೆ ಓಡಿಹೋಗಿದ್ದ ನೆಬಾಟನ ಮಗ ಯಾರೊಬ್ಬಾಮನು ನಡೆದ ಸಂಗತಿಗಳನ್ನು ಕೇಳಿದೊಡನೆ ಈಜಿಪ್ಟಿನಿಂದ ಹಿಂದಿರುಗಿ ಬಂದಿದ್ದನು.

3 ಇಸ್ರಯೇಲರು ಅವನನ್ನೂ ತಮ್ಮ ಬಳಿಗೆ ಕರೆಸಿಕೊಂಡರು. ಅವನು ಎಲ್ಲ ಇಸ್ರಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,

4 “ನಿಮ್ಮ ತಂದೆ ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದ್ದರು; ಅವರು ನೇಮಿಸಿದ್ದ ಬಿಟ್ಟೀ ಕೆಲಸವನ್ನು ನೀನು ಕಡಿಮೆಮಾಡಿ, ನಮ್ಮ ಮೇಲಿರುವ ಈ ಭಾರವಾದ ನೊಗವನ್ನು ಹಗುರಮಾಡುವುದಾದರೆ ನಾವು ನಿಮಗೆ ಸೇವೆಮಾಡುತ್ತೇವೆ,” ಎಂದನು. ಅವನು,

5 “ನೀವು ಮೂರು ದಿನಗಳಾದ ನಂತರ ಮತ್ತೆ ಬನ್ನಿ,” ಎಂದು ಉತ್ತರಕೊಟ್ಟನು; ಜನರು ಹೊರಟುಹೋದರು.

6 ಆಗ ಅರಸ ರೆಹಬ್ಬಾಮನು ತನ್ನ ತಂದೆ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ, ತಾನು ಜನರಿಗೆ ಕೊಡಬೇಕಾದ ಉತ್ತರದ ಬಗ್ಗೆ ಅವರ ಆಲೋಚನೆಯನ್ನು ಕೇಳಿದನು.

7 ಅವರು, “ನೀವು ಈ ಜನರಿಗೆ ದಯೆತೋರಿಸಿ, ಅವರನ್ನು ಮೆಚ್ಚಿಸುವ ಒಳ್ಳೆಯ ಉತ್ತರಕೊಟ್ಟರೆ ಅವರು ಯಾವಾಗಲೂ ನಿಮಗೆ ಅಧೀನರಾಗಿರುವರು,” ಎಂದರು.

8 ಆದರೆ ಅವನು ಆ ಹಿರಿಯರ ಆಲೋಚನೆಯನ್ನು ನಿರಾಕರಿಸಿದನು. ತನ್ನ ಸಂಗಡವೇ ಬೆಳೆದು ತನಗೆ ಮಂತ್ರಿಗಳಾದ ಯೌವನಸ್ಥರನ್ನು ಕರೆಸಿದನು.

9 “ನನ್ನ ತಂದೆ ಹೇರಿದ ನೊಗವನ್ನು ಹಗುರಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.

10 ಅವರು ಅವನಿಗೆ, “ನಿಮ್ಮ ತಂದೆ ನಮ್ಮ ಮೇಲೆ ಹೇರಿರುವ ಭಾರವಾದ ನೊಗವನ್ನು ಹಗುರಮಾಡು ಎಂಬುದಾಗಿ ನಿಮ್ಮನ್ನು ಬೇಡಿಕೊಂಡ ಜನರಿಗೆ ನೀವು, ‘ನನ್ನ ತಂದೆಯ ಸೊಂಟಕ್ಕಿಂತ ನನ್ನ ಕಿರಿಬೆರಳು ದಪ್ಪ;

11 ನನ್ನ ತಂದೆ ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವರು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳು ಕೊರಡೆಗಳಿಂದ ದಂಡಿಸುವೆನು’ ಎಂಬುದಾಗಿ ಹೇಳಬೇಕು", ಎಂದು ಉತ್ತರ ಕೊಟ್ಟರು.

12 ಯಾರೊಬ್ಬಾಮನೂ ಜನರೆಲ್ಲರೂ ಅರಸ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನ ಪುನಃ ಅವನ ಬಳಿಗೆ ಬಂದರು.

13 ಅರಸನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು; ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿದನು.

14 ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ, “ನನ್ನ ತಂದೆ ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ಅವರು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ, ನಾನಾದರೋ ನಿಮ್ಮನ್ನು ಮುಳ್ಳು ಕೊರಡೆಗಳಿಂದ ದಂಡಿಸುವೆನು,” ಎಂದು ನುಡಿದನು.

15 ಅರಸನು ಜನರ ಮಾತನ್ನು ಕೇಳದೆ ಹೋದದ್ದು ದೈವಯೋಗದಿಂದಲೇ. ಈ ಪ್ರಕಾರ ಸರ್ವೇಶ್ವರ ಶಿಲೋವಿನವನಾದ ಅಹೀಯನ ಮುಖಾಂತರ ನೆಬಾಟನ ಮಗ ಯಾರೊಬ್ಬಾಮನಿಗೆ ಹೇಳಿಸಿದ ಮಾತು ನೆರವೇರಿತು.

16 ತಮ್ಮ ಮಾತನ್ನು ಅರಸನು ಲಕ್ಷಿಸಲಿಲ್ಲ ಎಂದು ತಿಳಿದು, ಇಸ್ರಯೇಲರೆಲ್ಲರು ಅವನಿಗೆ, “ದಾವೀದನಿಗೂ ನಮಗೂ ಇನ್ನು ಮೇಲೆ ಏನೂ ಸಂಬಂಧವಿಲ್ಲ, ಜೆಸ್ಸೆಯ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ. ಇಸ್ರಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ತೆರಳಿರಿ; ದಾವೀದನ ಕಡೆಯವರೇ, ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿ,” ಎಂದು ಪ್ರತಿಭಟಿಸಿ ತಮ್ಮ ತಮ್ಮ ನಿವಾಸಗಳಿಗೆ ಹೊರಟುಹೋದರು.

17 ಜುದೇಯ ಪ್ರಾಂತ್ಯದಲ್ಲಿದ್ದ ಇಸ್ರಯೇಲರಾದರೋ ಅರಸ ರೆಹಬ್ಬಾಮನ ಅಧೀನದಲ್ಲೆ ಉಳಿದರು.

18 ರೆಹಬ್ಬಾಮನು ಬಿಟ್ಟೀಕೆಲಸದವರ ಮೇಲ್ವಿಚಾರಕರಾದ ಹದೋರಾಮನನ್ನು ಇಸ್ರಯೇಲರ ಬಳಿಗೆ ಕಳುಹಿಸಿದಾಗ, ಅವರು ಇವನನ್ನು ಕಲ್ಲೆಸೆದು ಕೊಂದರು. ಆಗ ಅರಸ ರೆಹಬ್ಬಾಮನು ಬೇಗನೆ ರಥವನ್ನೇರಿ ಜೆರುಸಲೇಮಿಗೆ ಓಡಿಹೋದನು.

19 ಇಸ್ರಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು