Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 21 - ಕನ್ನಡ ಸತ್ಯವೇದವು C.L. Bible (BSI)


ದಾವೀದನ ಪಲಾಯನ

1 ದಾವೀದನು ನೋಬ್ ಊರಲ್ಲಿದ್ದ ಯಾಜಕ ಅಹೀಮೆಲೆಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಭಯಭಕ್ತಿಯಿಂದ ಎದುರುಗೊಂಡನು. “ನಿಮ್ಮ ಜೊತೆಯಲ್ಲಿ ಒಬ್ಬನಾದರೂ ಇಲ್ಲವಲ್ಲಾ; ನೀವು ಒಬ್ಬರೇ ಬಂದದ್ದೇಕೆ?” ಎಂದು ಅವನನ್ನು ಕೇಳಿದನು.

2 ಅವನು, “ಅರಸರು ಒಂದು ಕೆಲಸವನ್ನು ಆಜ್ಞಾಪಿಸಿ ಇದನ್ನು ಯಾರಿಗೂ ತಿಳಿಸಬಾರದೆಂದು ಕಟ್ಟಪ್ಪಣೆಮಾಡಿ ನನ್ನನ್ನು ಕಳುಹಿಸಿದ್ದಾರೆ. ನನ್ನ ಆಳುಗಳು ಇಂಥಿಂಥ ಸ್ಥಳದಲ್ಲಿ ನನ್ನನ್ನು ಸಂಧಿಸಬೇಕೆಂದು ಗೊತ್ತುಮಾಡಿದ್ದೇನೆ.

3 ಈಗ ನಿನ್ನಲ್ಲಿ ಏನಾದರೂ ಉಂಟೋ? ನಾಲ್ಕೈದು ರೊಟ್ಟಿಗಳಾದರೂ ಬೇರೆ ಯಾವ ಆಹಾರಪದಾರ್ಥವಾದರೂ ಇದ್ದರೆ ನನಗೆ ಕೊಡು,” ಎಂದನು.

4 ಆ ಯಾಜಕನು ದಾವೀದನಿಗೆ, “ನನ್ನ ಬಳಿಯಲ್ಲಿ ಪವಿತ್ರವಾದ ಮೀಸಲು ರೊಟ್ಟಿಗಳ ಹೊರತು ಬೇರೆ ರೊಟ್ಟಿಗಳಿಲ್ಲ; ನಿಮ್ಮ ಆಳುಗಳು ಸದ್ಯಕ್ಕೆ ಸಂಗಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು,” ಎಂದನು.

5 ದಾವೀದನು, “ನಮ್ಮ ಎಲ್ಲಾ ಯುದ್ಧ ಪ್ರಯಾಣಗಳಲ್ಲಿ ಸ್ತ್ರೀಸಂಗ ನಿಷೇಧಮಾಡುವಂತೆ ಈಗಲೂ ಮಾಡಿದ್ದೇವೆ. ನಾವು ಸಾಧಾರಣ ಕಾರ್ಯಕ್ಕೆ ಹೊರಟಾಗಲೂ ಆಳುಗಳ ಸಾಮಾಗ್ರಿಗಳು ಪರಿಶುದ್ಧವಾಗಿರುತ್ತಿದ್ದವು. ಈ ದಿನವಂತು ಅವು ಮತ್ತಷ್ಟು ಪರಿಶುದ್ಧವಾಗಿ ಇರುತ್ತವಲ್ಲವೇ?’ ಎಂದು ಉತ್ತರಕೊಟ್ಟನು.

6 ಬಿಸಿರೊಟ್ಟಿಗಳನ್ನು ಅರ್ಪಿಸಿದ ಆ ದಿನದಲ್ಲಿ ಸರ್ವೇಶ್ವರನ ಸನ್ನಿಧಿಯಿಂದ ತೆಗೆಯಲಾದ ನೈವೇದ್ಯದ ಮೊದಲ ರೊಟ್ಟಿಗಳ ಹೊರತು ಅಲ್ಲಿ ಬೇರೆ ರೊಟ್ಟಿಗಳಿರಲಿಲ್ಲ. ಆದುದರಿಂದ ಯಾಜಕನು ಆ ಪರಿಶುದ್ಧವಾದ ರೊಟ್ಟಿಗಳನ್ನೇ ಕೊಟ್ಟುಬಿಟ್ಟನು.

7 ಅದೇ ದಿನ ಸೌಲನ ಪಶುಪಾಲರಲ್ಲಿ ಮುಖ್ಯಸ್ಥನಾದ ದೋಯೇಗನೆಂಬ ಎದೋಮ್ಯನು ಸರ್ವೇಶ್ವರನ ಆಲಯದಲ್ಲಿ ತಂಗಬೇಕಾಗಿತ್ತು.

8 ದಾವೀದನು ಅಹೀಮೆಲೆಕನನ್ನು, “ಅರಸನ ಕಾರ್ಯ ತುರ್ತಾದದ್ದು. ಆದ್ದರಿಂದ ಕತ್ತಿಯನ್ನಾಗಲಿ ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲು ಆಗಲಿಲ್ಲ. ನಿನ್ನ ಬಳಿಯಲ್ಲಿ ಭರ್ಜಿಯಾಗಲಿ, ಕತ್ತಿಯಾಗಲಿ ಇಲ್ಲವೇ?’ ಎಂದು ಕೇಳಿದನು.

9 ಅವನು, “ನೀವು ಏಲಾ ತಗ್ಗಿನಲ್ಲಿ ಕೊಂದುಹಾಕಿದ ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನು ಬಟ್ಟೆಯಲ್ಲಿ ಸುತ್ತಿ ಏಫೋದಿನ ಹಿಂದೆ ಇಡಲಾಗಿದೆ; ಬೇಕಾದರೆ ಅದನ್ನು ತೆಗೆದುಕೊಳ್ಳಿ. ಅದರ ಹೊರತು ನನ್ನ ಬಳಿ ಬೇರೊಂದಿಲ್ಲ,” ಎಂದು ಉತ್ತರಕೊಟ್ಟನು. ದಾವೀದನು, “ಅದಕ್ಕೆ ಸಮಾನವಾದದ್ದು ಮತ್ತೊಂದಿಲ್ಲ, ಅದನ್ನೇ ಕೊಡು,” ಎಂದು ಹೇಳಿ ತೆಗೆದುಕೊಂಡನು.

10 ದಾವೀದನು ಸೌಲನ ಭಯದಿಂದ ಅದೇ ದಿವಸ ಗತ್ ಊರಿನ ರಾಜನಾದ ಆಕೀಷನ ಬಳಿಗೆ ಓಡಿಹೋದನು.

11 ಆಕೀಷನ ಸೇವಕರು, “’ಸೌಲನು ಕೊಂದನು ಸಾವಿರಗಟ್ಟಳೆ, ದಾವೀದನು ಕೊಂದನು ಹತ್ತುಸಾವಿರಗಟ್ಟಳೆ’ ಎಂಬುದಾಗಿ ಮಹಿಳೆಯರು ಕುಣಿಯುತ್ತಾ ಹಾಡಿದ್ದು ಇವನನ್ನು ಕುರಿತಲ್ಲವೇ?’ ಎಂದು ಮಾತಾಡಿಕೊಂಡರು.

12 ದಾವೀದನು ಈ ಮಾತುಗಳನ್ನು ಕೇಳುತ್ತಲೆ, ಗತ್ ಊರಿನ ರಾಜನಾದ ಆಕೀಷನಿಗೆ ಬಹಳವಾಗಿ ಹೆದರಿದನು.

13 ಅವನ ಸೇವಕರ ಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿಕೊಂಡು, ಗಡ್ಡದ ಮೇಲೆಲ್ಲಾ ಜೊಲ್ಲು ಸುರಿಸುತ್ತಾ, ಕದಗಳ ಮೇಲೆ ಗೀಜುತ್ತಾ ತನ್ನನ್ನು ಹುಚ್ಚನಂತೆ ತೋರಿಸಿಕೊಂಡನು.

14 ಆಗ ಆಕೀಷನು ತನ್ನ ಸೇವಕರಿಗೆ, “ಈ ಮನುಷ್ಯ ಹುಚ್ಚನೆಂದು ನಿಮಗೆ ಕಾಣುವುದಿಲ್ಲವೇ? ಇವನನ್ನು ನನ್ನ ಹತ್ತಿರ ಏಕೆ ತಂದಿರಿ?

15 ನನ್ನ ಬಳಿ ಹುಚ್ಚರು ಕಡಿಮೆಯೆಂದು ನೆನೆಸಿ ನನ್ನನ್ನು ಮರುಳುಮಾಡಿ ಬೇಸರಗೊಳಿಸುವುದಕ್ಕಾಗಿ ಇವನನ್ನು ತಂದಿರೋ? ಇಂಥವನು ನನ್ನ ಮನೆಗೆ ಬರಬೇಕಿತ್ತೋ?’ ಎಂದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು