ಮುನ್ನುಡಿ
ಥೆಸಲೋನಿಕ ರೋಮ್ ಸಾಮ್ರಾಜ್ಯಕ್ಕೆ ಸೇರಿದ ಮಕೆದೋನ್ಯ ಪ್ರಾಂತ್ಯದ ಮುಖ್ಯಪಟ್ಟಣ. ಫಿಲಿಪ್ಪಿಯಲ್ಲಿ ಶುಭಸಂದೇಶವನ್ನು ಸಾರಿದ ನಂತರ ಪೌಲನು ಥೆಸಲೋನಿಕಕ್ಕೆ ಹೋಗಿ ಅಲ್ಲಿಯೂ ಒಂದು ಕ್ರೈಸ್ತಸಭೆಯನ್ನು ಸ್ಥಾಪಿಸಿದನು. ಆದರೆ ಸ್ವಲ್ಪಕಾಲದಲ್ಲೇ ಸಮಸ್ಯೆಯೊಂದು ಅವನನ್ನು ಕಾಡತೊಡಗಿತು: ಯೆಹೂದ್ಯರಲ್ಲದವರಲ್ಲಿ ಕೆಲವರು ಯೆಹೂದ್ಯ ಧರ್ಮದ ಬಗ್ಗೆ ಆಸಕ್ತರಾಗುತ್ತಿದ್ದರು. ಪೌಲನ ಬೋಧನೆಯನ್ನು ಕೇಳಿದ ಮೇಲಂತೂ ಅವರು ಕ್ರೈಸ್ತಧರ್ಮಕ್ಕೆ ಮಾರುಹೋದರು. ಇದು ಯೆಹೂದ್ಯರಿಗೆ ಹಿಡಿಸಲಿಲ್ಲ. ಮತ್ಸರದಿಂದಲೂ ಕಡುಗೋಪದಿಂದಲೂ ಅವರು ಪೌಲನ ವಿರುದ್ಧ ಸಿಡಿದೆದ್ದರು. ಪರಿಣಾಮವಾಗಿ, ಪೌಲನು ಥೆಸಲೋನಿಕವನ್ನು ಬಿಟ್ಟು ಬೆರೋಯಕ್ಕೆ ಹೋಗಬೇಕಾಯಿತು. ಅನಂತರ ಅವನು ಕೊರಿಂಥವನ್ನು ತಲುಪಿದಾಗ ಥೆಸಲೋನಿಕದವರ ವಾಸ್ತವಿಕ ಪರಿಸ್ಥಿತಿಯನ್ನು ಕುರಿತು ಸಮಾಚಾರ ಬಂದಿತು. ಪೌಲನ ಸಂಗಾತಿಯೂ ಸಹದಾಸನೂ ಆದ ತಿಮೊಥೇಯನು ಈ ಸಮಾಚಾರವನ್ನು ಕಳುಹಿಸಿದ್ದನು.
ಥೆಸಲೋನಿಯರಿಗೆ ಬರೆದ ಈ ಮೊದಲನೆಯ ಪತ್ರದಲ್ಲಿ ಪೌಲನು ಅಲ್ಲಿನ ಕ್ರೈಸ್ತವಿಶ್ವಾಸಿಗಳನ್ನು ಹುರಿದುಂಬಿಸಿ, ಅವರು ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಬೇಕೆಂದು ಆದೇಶ ನೀಡುತ್ತಾನೆ. ಅವರು ಅದುವರೆಗೂ ಕಾದಿರಿಸಿಕೊಂಡಿದ್ದ ಪ್ರೀತಿ ವಿಶ್ವಾಸಕ್ಕಾಗಿ ಅವರನ್ನು ಅಭಿನಂದಿಸುತ್ತಾನೆ.ಅವರೊಡನೆ ತಾನಿದ್ದಾಗ ನಡೆಸಿದ ತನ್ನ ಆದರ್ಶ ಜೀವನವನ್ನು ಅವರ ನೆನಪಿಗೆ ತರುತ್ತಾನೆ. ಕ್ರಿಸ್ತಯೇಸುವಿನ ಪುನರಾಗಮನದ ಬಗ್ಗೆ ಕೆಲವರಿಗಿದ್ದ ಸಂಶಯಗಳನ್ನು ಪರಿಹರಿಸಲು ಯತ್ನಿಸುತ್ತಾನೆ; ಯೇಸುವಿನ ಪುನರಾಗಮನಕ್ಕೆ ಮುಂಚೆ ಮೃತರಾದ ಭಕ್ತರು ನಿತ್ಯಜೀವದಲ್ಲಿ ಭಾಗಿಗಳಾಗಲು ಸಾಧ್ಯವೇ? ಯೇಸು ಪುನರಾಗಮಿಸುವುದಾದರೂ ಯಾವಾಗ? ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪ್ರಭು ಯೇಸು ಮರಳಿ ಆಗಮಿಸುವವರೆಗೂ ಅವರು ದೃಢವಾದ ನಂಬಿಕೆ ನಿರೀಕ್ಷೆಯನ್ನಿಟ್ಟು, ಶಾಂತಿಸಹನೆಯಿಂದ ತಮ್ಮ ಜೀವನದ ಹೋರಾಟವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಪ್ರೋತ್ಸಾಹಿಸುತ್ತಾನೆ.
ಪರಿವಿಡಿ
ಪೀಠಿಕೆ 1:1
ವಂದನೆ ಮತ್ತು ಶ್ಲಾಘನೆ 1:2—3:13
ಕ್ರೈಸ್ತ ಸನ್ನಡತೆಗೆ ಪ್ರೋತ್ಸಾಹ 4:1-12
ಕ್ರಿಸ್ತಯೇಸುವಿನ ಪುನರಾಗಮನ 4:13—5:11
ಅಂತಿಮ ಹಿತವಚನಗಳು 5:12-22
ಸಮಾಪ್ತಿ 5:23-28