Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಅರಸುಗಳು 18 - ಕನ್ನಡ ಸತ್ಯವೇದವು C.L. Bible (BSI)


ಸತ್ಯದೇವರು ಬಾಳನೋ? ಸರ್ವೇಶ್ವರನೋ?

1 ಅನೇಕ ದಿವಸಗಳಾದನಂತರ ಎಲೀಯನಿಗೆ ಸರ್ವೇಶ್ವರನ ವಾಣಿ ಉಂಟಾಯಿತು. ಬರಗಾಲದ ಮೂರನೆಯವರ್ಷದಲ್ಲಿ ಸರ್ವೇಶ್ವರ ಅವನಿಗೆ, “ನೀನು ಹೋಗಿ ಅಹಾಬನನ್ನು ಕಾಣು; ನಾನು ನಾಡಿಗೆ ಮಳೆಕೊಡುತ್ತೇನೆ,” ಎಂದರು.

2 ಎಲೀಯನು ಅಹಾಬನನ್ನು ನೋಡುವುದಕ್ಕೆ ಹೊರಟನು. ಆಗ ಸಮಾರಿಯದಲ್ಲಿ ಕ್ಷಾಮ ಬಹಳ ಭೀಕರವಾಗಿತ್ತು.

3 ಆದುದರಿಂದ ಅಹಾಬನು ತನ್ನ ಉಗ್ರಾಣಿಕನಾದ ಓಬದ್ಯ ಎಂಬವನನ್ನು ಕರೆಯಿಸಿದನು.

4 (ಈಜೆಬೆಲಳು ಸರ್ವೇಶ್ವರನ ಪ್ರವಾದಿಗಳನ್ನು ಸಂಹರಿಸುತ್ತಿದ್ದಾಗ ಈ ಓಬದ್ಯನು ಸರ್ವೇಶ್ವರನಲ್ಲಿ ಬಹು ಭಯಭಕ್ತಿಯುಳ್ಳವನಾಗಿ ನೂರು ಮಂದಿ ಪ್ರವಾದಿಗಳನ್ನು ಕರೆದುಕೊಂಡುಹೋಗಿ ಅವರನ್ನು ಐವತ್ತೈವತ್ತು ಮಂದಿಯನ್ನಾಗಿ, ಗವಿಗಳಲ್ಲಿ ಅಡಗಿಸಿಟ್ಟು, ಅವರಿಗೆ ಅನ್ನಪಾನಗಳನ್ನು ಕೊಟ್ಟು ಸಾಕುತ್ತಿದ್ದನು.)

5-6 ಅಹಾಬನು ಅವನಿಗೆ, “ನಾವು ದೇಶಸಂಚಾರಮಾಡುತ್ತಾ ಎಲ್ಲಾ ಹಳ್ಳ ಬುಗ್ಗೆಗಳಿಗೆ ಹೋಗಿ ಅವುಗಳಲ್ಲಿ ಹುಲ್ಲು ಸಿಕ್ಕುತ್ತದೋ ನೋಡೋಣ; ಸಿಕ್ಕುವುದಾದರೆ ನಮ್ಮ ಕುದುರೆಗಳೂ ಹೇಸರಕತ್ತೆಗಳೂ ಉಳಿಯುವುವು; ಆಗ ಅವುಗಳನ್ನು ಕೊಲ್ಲುವ ಅವಶ್ಯಕತೆ ಇರುವುದಿಲ್ಲ,” ಎಂದು ಹೇಳಿ ಸಂಚಾರಕ್ಕಾಗಿ ನಾಡನ್ನು ಎರಡು ಭಾಗಮಾಡಿ, ಒಂದು ಭಾಗಕ್ಕೆ ಓಬದ್ಯನನ್ನು ಕಳುಹಿಸಿ, ಇನ್ನೊಂದು ಭಾಗಕ್ಕೆ ತಾನೇ ಹೊರಟುಹೋದನು.

7 ಓಬದ್ಯನು ಪ್ರಯಾಣಮಾಡುತ್ತಿರುವಾಗ ಎಲೀಯನು ತಟ್ಟನೆ ಅವನಿಗೆ ಎದುರಾದನು. ಓಬದ್ಯನು ಅವನ ಗುರುತು ಹಿಡಿದು ಸಾಷ್ಟಾಂಗ ನಮಸ್ಕಾರ ಮಾಡಿದನು. “ತಾವು ನನ್ನ ಸ್ವಾಮಿ ಎಲೀಯರೋ?’ ಎಂದು ಕೇಳಿದನು.

8 ಎಲೀಯನು, “ಹೌದು; ನೀನು ಹೋಗಿ ನಿನ್ನ ಒಡೆಯನಿಗೆ, ‘ಎಲೀಯನು ಬಂದಿದ್ದಾನೆಂದು’ ಹೇಳು,” ಎಂದನು.

9 ಅದಕ್ಕೆ ಓಬದ್ಯನು, “ಅಹಾಬನು ನನ್ನನ್ನು ಕೊಲ್ಲುವ ಹಾಗೆ ತಾವು ನನ್ನನ್ನು ಅವನ ಕೈಗೆ ಒಪ್ಪಿಸುವುದೇಕೆ? ನಾನೇನು ಪಾಪಮಾಡಿದೆ?

10 ತಮ್ಮ ದೇವರಾದ ಸರ್ವೇಶ್ವರನಾಣೆ, ನನ್ನ ಒಡೆಯ ಸೇವಕರನ್ನು ಅಟ್ಟಿ ನಿಮ್ಮನ್ನು ಹುಡುಕದ ಜನಾಂಗವಾಗಲಿ, ರಾಜ್ಯವಾಗಲಿ ಒಂದೂ ಇಲ್ಲ. ಆ ಜನಾಂಗ, ರಾಜ್ಯಗಳವರು, ‘ಎಲೀಯನು ನಮ್ಮಲ್ಲಿರುವುದಿಲ್ಲ,’ ಎಂದು ಹೇಳಿದಾಗ ಅವನು ಅವರಿಂದ ಪ್ರಮಾಣ ಮಾಡಿಸಿದನು.

11 ಹೀಗಿದ್ದರೂ ತಾವು ನನಗೆ, “ಎಲೀಯನು ಬಂದಿದ್ದಾನೆಂದು ನಿನ್ನ ಒಡೆಯನಿಗೆ ತಿಳಿಸು,” ಎಂಬುದಾಗಿ ಆಜ್ಞಾಪಿಸಬಹುದೆ?

12 ನಾನು ತಮ್ಮನ್ನು ಬಿಟ್ಟು ಹೊರಟ ಕೂಡಲೆ, ಸರ್ವೇಶ್ವರನ ಆತ್ಮ ತಮ್ಮನ್ನು ನನಗೆ ಗೊತ್ತಿಲ್ಲದ ಬೇರೊಂದು ಸ್ಥಳಕ್ಕೆ ಒಯ್ಯುವುದು. ನಾನು ಹೋಗಿ ಅಹಾಬನಿಗೆ ಹೇಳುವಷ್ಟರಲ್ಲಿ ತಾವು ಅವನಿಗೆ ಸಿಕ್ಕದೆಹೋದರೆ ಅವನು ನನ್ನನ್ನು ಕೊಂದುಹಾಕುವನು. ನಾನು ಚಿಕ್ಕಂದಿನಿಂದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಲ್ಲವೇ?

13 ಈಜೆಬೆಲಳು ಸರ್ವೇಶ್ವರನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ನಾನು ಮಾಡಿದ್ದು ನನ್ನ ಸ್ವಾಮಿಯಾದ ತಮಗೆ ತಿಳಿಸಲಾಗಿದೆ ಅಲ್ಲವೆ? ಅವರಲ್ಲಿ ನೂರು ಮಂದಿಯನ್ನು ತೆಗೆದುಕೊಂಡು ಹೋಗಿ ಐವತ್ತೈವತ್ತು ಮಂದಿಯನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅನ್ನಪಾನಗಳನ್ನು ಕೊಟ್ಟು ಸಾಕಿದೆನಲ್ಲವೇ?

14 ಹೀಗಿದ್ದರೂ ತಾವು ನನಗೆ, ‘ಎಲೀಯನು ಬಂದಿದ್ದಾನೆಂಬುದಾಗಿ’ ನಿನ್ನ ಒಡೆಯನಿಗೆ ತಿಳಿಸು,” ಎಂದು ಆಜ್ಞಾಪಿಸುತ್ತೀರಿ; ಅವನು ನನ್ನನ್ನು ಕೊಂದೇ ಕೊಲ್ಲುವನಲ್ಲವೇ?’ ಎಂದು ಉತ್ತರಕೊಟ್ಟನು.

15 ಆಗ ಎಲೀಯನು, “ನಾನು ಸನ್ನಿಧಿಸೇವೆಮಾಡುತ್ತಿರುವ ಸರ್ವಶಕ್ತನಾಣೆ, ಈ ದಿನ ನಾನು ಅಹಾಬನಿಗೆ ಹೇಗೂ ಕಾಣಿಸಿಕೊಳ್ಳಲೇಬೇಕು,” ಎಂದನು.

16 ಓಬದ್ಯನು ಅಹಾಬನ ಬಳಿಗೆ ಹೋಗಿ ಅವನಿಗೆ ಈ ಮಾತನ್ನು ತಿಳಿಸಿದನು. ಅಹಾಬನು ಎಲೀಯನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಬಂದು,

17 ಅವನನ್ನು ಕಂಡಕೂಡಲೆ, “ಇಸ್ರಯೇಲರಿಗೆ ಆಪತ್ತನ್ನು ಬರಮಾಡಿದವನೇ, ನೀನು ಬಂದಿರುವೆಯಾ?’ ಎಂದನು.

18 ಅದಕ್ಕೆ ಎಲೀಯನು, “ಅವರಿಗೆ ಆಪತ್ತನ್ನು ಬರಮಾಡಿದವನು ನಾನಲ್ಲ; ಸರ್ವೇಶ್ವರನ ಆಜ್ಞೆಗಳನ್ನು ಉಲ್ಲಂಘಿಸಿ ಬಾಳನ ವಿಗ್ರಹಗಳನ್ನು ಪೂಜಿಸಿದ ನೀನೂ ನಿನ್ನ ಮನೆಯವರೂ ಅದಕ್ಕೆ ಕಾರಣರು.

19 ನೀನು ಈಗ ಎಲ್ಲ ಇಸ್ರಯೇಲರನ್ನು, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತುಮಂದಿ ಪ್ರವಾದಿಗಳನ್ನು ಹಾಗೂ ಅಶೇರದೇವತೆಯ ನಾನೂರೈವತ್ತುಮಂದಿ ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು,” ಎಂದು ಹೇಳಿದನು.

20 ಅಹಾಬನು ಇಸ್ರಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು.

21 ಎಲೀಯನು ಜನರೆಲ್ಲರ ಬಳಿಗೆ ಹೋಗಿ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಸರ್ವೇಶ್ವರಸ್ವಾಮಿ ನಿಮಗೆ ದೇವರಾಗಿದ್ದರೆ ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ,” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡು, ಅವನು ಮತ್ತೆ ಅವರಿಗೆ,

22 “ಸರ್ವೇಶ್ವರನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ; ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತುಮಂದಿ ಇದ್ದಾರೆ.

23 ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ; ಅವುಗಳಲ್ಲೊಂದನ್ನು ಆರಿಸಿಕೊಂಡು, ಕಡಿದು ತುಂಡುಮಾಡಿ ಕಟ್ಟಿಗೆಯ ಮೇಲಿಡಲಿ; ಆದರೆ ಬೆಂಕಿ ಹೊತ್ತಿಸಬಾರದು. ನಾನೂ ಇನ್ನೊಂದು ಹೋರಿಯನ್ನು ಹಾಗೆಯೇ ಕಡಿದು ಬೆಂಕಿ ಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು.

24 ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಅನಂತರ ನಾನು ಸರ್ವೇಶ್ವರನ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದು ನಿಶ್ಚಯಿಸೋಣ,” ಎಂದನು. ಜನರೆಲ್ಲರು, “ಸರಿ, ನೀನು ಹೇಳಿದಂತೆಯೇ ಆಗಲಿ,” ಎಂದು ಉತ್ತರಕೊಟ್ಟರು.

25 ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚುಮಂದಿ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು, ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಆದರೆ ಬೆಂಕಿಯನ್ನು ಹೊತ್ತಿಸಕೂಡದು,” ಎಂದನು.

26 ಅಂತೆಯೇ ತರಲಾದ ಹೋರಿಗಳಲ್ಲಿ ಒಂದನ್ನು ಅವರು ತೆಗೆದುಕೊಂಡು ಸಿದ್ಧಪಡಿಸಿದರು. ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ, ನಮಗೆ ಕಿವಿಗೊಡು,” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರು. ಆದರೆ ಯಾವ ವಾಣಿಯೂ ಕೇಳಿಸಲಿಲ್ಲ; ಅವರು ಪೀಠದ ಸುತ್ತಲೂ ಕುಣಿದಾಡಿದರು. ಆದರೂ ಯಾರೂ ಉತ್ತರಕೊಡಲಿಲ್ಲ.

27 ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿದನು: “ಗಟ್ಟಿಯಾಗಿ ಕೂಗಿರಿ; ಅವನು ದೇವರಲ್ಲವೆ? ಈಗ ಒಂದು ವೇಳೆ ಅವನು ಧ್ಯಾನದಲ್ಲಿ ಇರಬಹುದು; ಇಲ್ಲವೇ, ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು; ಇಲ್ಲದಿದ್ದರೆ, ನಿದ್ರೆಮಾಡುತ್ತಿರಬೇಕು; ಎಚ್ಚರವಾಗಲಿ,” ಎಂದು ಹೇಳಿದನು.

28 ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು.

29 ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಿದ್ದರು. ಆದರೂ ಯಾವ ವಾಣಿಯೂ ಕೇಳಿಸಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ; ಅವರನ್ನು ಯಾವನೂ ಲಕ್ಷಿಸಲೂ ಇಲ್ಲ.

30 ಅನಂತರ ಎಲೀಯನು ಜನರೆಲ್ಲರನ್ನು ಹತ್ತಿರಕ್ಕೆ ಕರೆದನು; ಅವರು ಬಂದರು. ಹಾಳಾಗಿದ್ದ ಅಲ್ಲಿನ ಸರ್ವೇಶ್ವರನ ಪೀಠವನ್ನು ದುರಸ್ತು ಮಾಡಿಸಿದನು.

31 ಸರ್ವೇಶ್ವರನಿಂದ ‘ಇಸ್ರಯೇಲ್’ ಎಂಬ ಹೆಸರು ಹೊಂದಿದ ಯಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು,

32 ಸರ್ವೇಶ್ವರನ ಹೆಸರಿಗಾಗಿ ಒಂದು ಪೀಠವನ್ನು ಕಟ್ಟಿಸಿದನು. ಅದರ ಸುತ್ತಲೂ ಇಪ್ಪತ್ತು ಸೇರು ಬೀಜವರೀ ನೆಲವನ್ನು ಅಗಿಸಿ ಕಾಲುವೆ ಮಾಡಿಸಿದನು.

33 ಕಟ್ಟಿಗೆಯನ್ನು ಪೀಠದ ಮೇಲೆ ಪೇರಿಸಿ, ಹೋರಿಯನ್ನು ವಧಿಸಿ ತುಂಡುಮಾಡಿ, ಅದರ ಮೇಲೆ ಇಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಬಲಿಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಹೊಯ್ಯಿರಿ,” ಎಂದು ಆಜ್ಞಾಪಿಸಿದನು.

34 ಅವರು ಅಂತೆಯೇ ತೆಗೆದುಕೊಂಡು ಬಂದರು. “ಇನ್ನೊಂದು ಸಾರಿ ತನ್ನಿ,” ಎಂದು ಹೇಳಿದನು. ಅವರು ಇನ್ನೊಮ್ಮೆ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರ ಆಜ್ಞಾಪಿಸಲು ಅವರು ಮತ್ತೊಮ್ಮೆ ತಂದು ಸುರಿದರು.

35 ನೀರು ವೇದಿಯ ಸುತ್ತಲೂ ಹರಿಯಿತು. ಇದಲ್ಲದೆ, ಅವನು ಕಾಲುವೆಯನ್ನೂ ನೀರಿನಿಂದ ತುಂಬಿಸಿದನು.

36 ಸಂಧ್ಯಾನೈವೇದ್ಯದ ಹೊತ್ತಿಗೆ, ಪ್ರವಾದಿ ಎಲೀಯನು ಪೀಠದ ಹತ್ತಿರ ಬಂದು, “ಅಬ್ರಹಾಮ್, ಇಸಾಕ್, ಇಸ್ರಯೇಲರ ದೇವರೇ, ಸರ್ವೇಶ್ವರಾ, ನೀವೊಬ್ಬರೇ ಇಸ್ರಯೇಲರ ದೇವರಾಗಿರುತ್ತೀರಿ ಎಂಬುದನ್ನು, ನಾನು ನಿನ್ನ ದಾಸನಾಗಿರುತ್ತೇನೆಂಬುದನ್ನು ಹಾಗು ಇದನ್ನೆಲ್ಲಾ ನಿಮ್ಮ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನು ಈ ದಿನ ತೋರಿಸಿಕೊಡಿ.

37 ನಮಗೆ ಕಿವಿಗೊಡಿ; ಸರ್ವೇಶ್ವರಾ ನಮಗೆ ಕಿವಿಗೊಡಿ; ಸರ್ವೇಶ್ವರನಾದ ನೀವೊಬ್ಬರೇ ದೇವರು ಹಾಗು ಈ ಜನರ ಮನಸ್ಸನ್ನು ನಿಮ್ಮಕಡೆಗೆ ತಿರುಗಿಸಿಕೊಳ್ಳುವವರು ಆಗಿರುತ್ತೀರಿ ಎಂಬುದನ್ನು ಇವರಿಗೆ ತಿಳಿಯಪಡಿಸಿ,” ಎಂದು ಪ್ರಾರ್ಥಿಸಿದನು.

38 ಕೂಡಲೆ ಸರ್ವೇಶ್ವರನ ಕಡೆಯಿಂದ ಬೆಂಕಿ ಇಳಿದುಬಂದು ಬಲಿಮಾಂಸವನ್ನೂ ಕಟ್ಟಿಗೆ ಕಲ್ಲುಮಣ್ಣುಗಳನ್ನೂ ದಹಿಸಿಬಿಟ್ಟಿತು. ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು.

39 ಜನರೆಲ್ಲರೂ ಅದನ್ನು ಕಂಡು ಬೋರಲಬಿದ್ದರು; “ಸರ್ವೇಶ್ವರನೇ ದೇವರು, ಸರ್ವೇಶ್ವರನೇ ದೇವರು,” ಎಂದು ಕೂಗಿದರು.

40 ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು,” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಕೊಲ್ಲಿಸಿದನು.


ಕ್ಷಾಮದ ಅಂತ್ಯ

41 ಅನಂತರ ಎಲೀಯನು ಆಹಾಬನಿಗೆ, “ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ; ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ,” ಎಂದನು.

42 ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದಾಗ, ಎಲೀಯನು ಕರ್ಮೆಲಿನ ತುದಿಗೆ ಹೋಗಿ, ಅಲ್ಲಿ ನೆಲದ ಮೇಲೆ ಬಿದ್ದುಕೊಂಡು, ಮೊಣಕಾಲಿನ ಮಧ್ಯೆ ತಲೆಯನ್ನಿಟ್ಟನು.

43 ಅವನು ತನ್ನ ಸೇವಕನಿಗೆ, “ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು,” ಎಂದು ಆಜ್ಞಾಪಿಸಿದನು. ಸೇವಕನು ಹೋಗಿ, ನೋಡಿಬಂದು ಏನೂ ತೋರುವುದಿಲ್ಲವೆಂದು ಹೇಳಿದನು. ಹೀಗೆ ಅವನನ್ನು ಏಳುಸಾರಿ ಕಳುಹಿಸಿದನು.

44 ಏಳನೆಯ ಸಾರಿ ಆ ಸೇವಕನು, “ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಲಿದೆ,” ಎಂದು ತಿಳಿಸಿದನು. ಆಗ ಎಲೀಯನು ಅವನಿಗೆ, “ನೀನು ಹೋಗಿ ಅಹಾಬನಿಗೆ, ‘ಬೇಗನೆ ರಥವನ್ನು ಹೂಡಿಸಿಕೊಂಡು, ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು’ ಎಂದು ಹೇಳು,” ಎಂದನು.

45 ತುಸು ಹೊತ್ತಿನಲ್ಲಿಯೇ ಆಕಾಶವು ಕಾರ್ಮೋಡಗಾಳಿಗಳಿಂದ ತುಂಬಿ ದೊಡ್ಡ ಮಳೆ ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕುಳಿತುಕೊಂಡು ಜೆಸ್ರೀಲಿಗೆ ಹೋದನು.

46 ಸರ್ವೇಶ್ವರನ ಹಸ್ತ ಎಲೀಯನ ಸಂಗಡ ಇದ್ದುದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಜೆಸ್ರೀಲನ್ನು ಸೇರಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು