ಹಬಕ್ಕೂಕ 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದೇವರ ಉತ್ತರ 1 ನನ್ನ ಕೋವರದಲ್ಲಿ ನಿಂತುಕೊಳ್ಳುವೆನು. ಬುರುಜಿನ ಮೇಲೆ ನೆಲೆಯಾಗಿರುವೆನು. ಯೆಹೋವನು ನನಗೆ ಏನು ಹೇಳುವನೋ ನನ್ನ ಆಕ್ಷೇಪಣೆಯನ್ನು ನಿವಾರಿಸಿಕೊಳ್ಳಲು ಯಾವ ಉತ್ತರ ಕೊಡಬೇಕೋ ಎಂದು ಎದುರುನೋಡುವೆನು ಅಂದುಕೊಂಡನು. 2 ಆಗ ಯೆಹೋವನು ನನಗೆ ಈ ಉತ್ತರವನ್ನು ದಯಪಾಲಿಸಿದನು, “ನಿನಗಾದ ದರ್ಶನವನ್ನು ಬರೆದಿಡು; ಓದುವವರು ಸುಲಭವಾಗಿ ಶೀಘ್ರವಾಗಿ ಓದಲು ಅನುಕೂಲವಾಗುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತಿಡು! 3 ಸೂಕ್ತ ಹಾಗು ನಿಯಮಿತ ಕಾಲದಲ್ಲಿ ಆ ದರ್ಶನದಲ್ಲಿ ಕಂಡದ್ದು ನೆರವೇರುವುದು, ಅದರ ಅಂತಿಮ ಪರಿಣಾಮ ಶೀಘ್ರದಲ್ಲೇ ಗೊತ್ತಾಗುವುದು. ತಡವಾದರೂ ಅದಕ್ಕೆ ಕಾದಿರು; ಅದು ಖಂಡಿತವಾಗಿ ಕೈಗೂಡುವುದು. 4 ಇಗೋ, ದುಷ್ಟನ ಅಂತರಾತ್ಮವು ತನ್ನ ಕ್ರಿಯೆಗಳಿಂದ ಉಬ್ಬಿಹೋಗಿದೆ, ಆದರೆ, ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು. 5 ಅಲ್ಲದೆ ಮದ್ಯಪಾನವು ಮೋಸಕರವಾದ ಕಾರಣ ದುಷ್ಟನನ್ನು ಮದವೇರಿಸುವುದು, ಸ್ವಸ್ಥಳದಲ್ಲಿ ನಿಲ್ಲಲು ಬಿಡುವುದಿಲ್ಲ; ಪಾತಾಳದಷ್ಟು ಅತಿ ಆಶೆಗೆ ಪ್ರೆರೇಪಿಸಿ ಮೃತ್ಯುವಿನಂತೆ ಅತೃಪ್ತನಾಗಿ ಜೀವಿಸುವನು. ಯೆಹೋವನ ಒಡಂಬಡಿಕೆಯ ವಿರುದ್ಧ ಜೀವಿಸುವವರನ್ನು ತನ್ನ ಕಡೆಗೆ ಆಕರ್ಷಿಸುವನು. ಕಸ್ದೀಯರ ಅಪರಾಧಗಳ ಖಂಡನೆ 6 “ಆದರೆ ಹೀಗೆ ಅವನ ದುರಾಶೆಯ ಪಾಶಕ್ಕೆ ಗುರಿಯಾದವರು ಅವನ ಬಗ್ಗೆ ತಿಳಿದು ಗೇಲಿ, ಅಪಹಾಸ್ಯದ ಲಾವಣಿ ಗೀತೆಗಳನ್ನು ರಚಿಸಿ ಹಾಡುವರು. ‘ಅನ್ಯರ ವಸ್ತುಗಳನ್ನು ಅಡವಿಟ್ಟುಕೊಂಡು ಐಶ್ವರ್ಯ ಸಂಪಾದಿಸುವವನ ಗತಿಯನ್ನು ಏನೆಂದು ಹೇಳುವುದು, ಅವನು ಎಷ್ಟು ಕಾಲ ಹೀಗೆ ಮಾಡುವನು!’ 7 ನಿನ್ನ ಬಳಿ ಸಾಲಪಡೆದವರೇ ನಿನಗೆ ಎದುರಾಗಿ ನಿಲ್ಲುವರು, ನಿನಗೆ ಬಾಕಿ ಕೊಡಬೇಕಾದವರು ನಿನಗೆ ಬೆದರಿಕೆ ಹಾಕಿ ನಿನ್ನನ್ನು ಕೊಳ್ಳೆ ಹೊಡೆದು ಲೂಟಿಮಾಡುವರು. 8 ನೀನು ಬಹು ಜನರನ್ನು ಕೊಳ್ಳೆಹೊಡೆದು, ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ, ಪಟ್ಟಣವನ್ನೂ, ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿರುವೆ. ಈ ಕಾರಣದಿಂದ, ಜನಾಂಗಗಳಲ್ಲಿ ಉಳಿದವರೆಲ್ಲರೂ ನಿನ್ನನ್ನು ಕೊಳ್ಳೆ ಹೊಡೆಯುವರು. 9 ‘ಕೇಡಿನಿಂದ, ತಪ್ಪಿಸಿಕೊಳ್ಳಲು ತನ್ನ ಗೂಡನ್ನು ಎತ್ತರದಲ್ಲಿ ಕಟ್ಟಿ ತಪ್ಪಿಸಿಕೊಳ್ಳಬೇಕೆಂದು, ತನ್ನ ಕುಟುಂಬಕ್ಕೆ ಆಸ್ತಿಯನ್ನು ಅನ್ಯಾಯವಾಗಿ ಮೋಸದಿಂದ ದೋಚಿಕೊಳ್ಳುವವನ ಗತಿಯನ್ನು ಏನು ಹೇಳಲಿ; 10 ನೀನು ಬಹು ಜನರನ್ನು ನಿರ್ಮೂಲ ಮಾಡಿದ್ದು ನಿನ್ನ ಕುಂಟುಂಬಕ್ಕೆ ಅವಮಾನವನ್ನೇ ತಂದಂತಾಯಿತು, ನಿನಗೇ ನೀನೇ ಕೆಡುಕು ಮಾಡಿಕೊಂಡಿದ್ದೀ. 11 ಗೋಡೆಯೊಳಗಿಂದ ಕಲ್ಲುಗಳು ನಿನ್ನ ಮೇಲೆ ತಪ್ಪುಹೊರಿಸಿ ಕೂಗುವವು; ಚಾವಣಿಯ ತೊಲೆಗಳು ಸಹ ಅದಕ್ಕೆ ಮಾರ್ದನಿ ಕೊಡುತ್ತವೆ.’ 12 ‘ಅಯ್ಯೋ, ಪಟ್ಟಣವನ್ನು ನರಹತ್ಯದಿಂದ ಕಟ್ಟುವವನೂ, ಊರನ್ನು ಅನ್ಯಾಯದಿಂದ ಸ್ಥಾಪಿಸುವವರ ಗತಿಯನ್ನು ಏನು ಹೇಳಲಿ! 13 ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು, ಈ ರೀತಿಯಾಗಿ ಜನರು ಪಟ್ಟ ಪರಿಶ್ರಮವು ವ್ಯರ್ಥವಾಗುವುದು ಎಂದು ಯೆಹೋವನು ನುಡಿದ್ದರಿಂದಲೇ ಅಲ್ಲವೇ; ಇದೆಲ್ಲ ಸೇನಾಧೀಶ್ವರನ ಚಿತ್ತವಷ್ಟೇ. 14 ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವುದು.’ 15 ‘ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ ನಿನ್ನ ನೆರೆಯವನಿಗೆ ಕುಡಿಸಿ, ಅವನ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ, ನಿನ್ನ ಗತಿಯನ್ನು ಏನು ಹೇಳಲಿ! 16 ನೀನು ಮಾನವಂತನಲ್ಲ, ನಿನಗೆ ಸನ್ಮಾನವಲ್ಲಾ ಅವಮಾನ ಕಟ್ಟಿಟ್ಟ ಬುತ್ತಿ. ನೀನು ಕುಡಿ ಕುಡಿದು ನಗ್ನನಾಗು, ಯೆಹೋವನ ಬಲಗೈಯಲ್ಲಿರುವ ನಿನ್ನ ಪಾಪದ ಕೊಡ ತುಂಬಿ ಅವಮಾನವೇ ನಿನಗೆ ಸಲ್ಲುವುದು. 17 ಲೆಬನೋನಿಗೆ ಆದಂಥ ಹಿಂಸೆಯ ಬಾರವು ನಿನ್ನನ್ನು ಕಾಡುವುದು, ಮೃಗಪಶುಗಳ ನಾಶನವು ನಿನ್ನನ್ನು ಹೆದರಿಸುವುದು; ನೀನು ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ, ಪಟ್ಟಣವನ್ನೂ, ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿರುವೆ. ಹಿಂಸಿಸಿದ ಕಾರಣ ಅದು ನಿನ್ನನ್ನು ಕಾಡುವುದು. 18 ವಿಗ್ರಹ ಕೆತ್ತುವವನ ವಿಗ್ರಹವಾಗಲಿ ಅಥವಾ ಎರಕದಿಂದ ಮಾಡಿದ ಗೊಂಬೆಗಳಿಂದಾಗಲಿ ಲಾಭವೇನು? ಹಾಗೆ ದೇವರುಗಳನ್ನು ರೂಪಿಸುವವರು ಸುಳ್ಳನ್ನು ಬಿತ್ತುವವರು; ಏಕೆಂದರೆ, ಆ ನಿರ್ಜೀವ ವಿಗ್ರಹವನ್ನು ನಿರ್ಮಿಸಿದವನು ತನ್ನ ಕೈಕೆಲಸದ ಮೇಲೆಯೇ ಭರವಸೆ ಇಟ್ಟಿದ್ದಾನೆ.’ 19 ‘ಮರದ ವಿಗ್ರಹಗಳಿಗೆ ಎಚ್ಚೆತ್ತುಕೋ,’ ಜಡವಾದ ಕಲ್ಲಿನ ವಿಗ್ರಹಗಳಿಗೆ, ‘ಎದ್ದೇಳು’ ಎಂದು ಅಪ್ಪಣೆಕೊಡುವವನು ಬುದ್ಧಿಹೀನನು. ಇಂಥ ಬೊಂಬೆಯು ಬೋಧಿಸೀತೇ? ಇಗೋ, ಆ ವಿಗ್ರಹಗಳಿಗೆ ಬೆಳ್ಳಿಬಂಗಾರವನ್ನು ಹೊದಿಸಿದ್ದಾರೆ ಆದರೂ ಅದರೊಳಗೆ ಜೀವವೇ ಇಲ್ಲ. 20 ಆದರೆ, ಯೆಹೋವನು ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ; ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.