ಯೋಯೇಲ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಪೆತೂವೇಲನ ಮಗನಾದ ಯೋವೇಲನಿಗೆ ಯೆಹೋವನು ದಯಪಾಲಿಸಿದ ವಾಕ್ಯವು. ಮಿಡತೆಗಳಿಂದಾದ ಹಾನಿ 2 ವೃದ್ಧರೇ, ಇದನ್ನು ಕೇಳಿರಿ, ದೇಶದ ನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ. ಇಂಥ ಬಾಧೆಯು ನಿಮ್ಮ ಕಾಲದಲ್ಲಾಗಲಿ ನಿಮ್ಮ ಪೂರ್ವಿಕರ ಕಾಲದಲ್ಲಿಯಾಗಲಿ ಸಂಭವಿಸಿತ್ತೋ? 3 ಇದನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ ಮತ್ತು ಅವರು ಮುಂದಿನ ತಲೆಮಾರಿನವರಿಗೆ ತಿಳಿಸಲಿ. 4 ಚೂರಿಮಿಡತೆ ತಿಂದು ಉಳಿದಿದ್ದ ಬೆಳೆಯನ್ನು ಗುಂಪು ಮಿಡತೆ ತಿಂದು ಬಿಟ್ಟಿತು; ಗುಂಪು ಮಿಡತೆ ತಿಂದು ಉಳಿದದ್ದನ್ನು ಕುದರೆ ಮಿಡತೆ ತಿಂದು ಬಿಟ್ಟಿತು; ಕುದರೆ ಮಿಡತೆ ತಿಂದು ಉಳಿದದ್ದನ್ನು ಕಂಬಳಿ ಮಿಡತೆ ತಿಂದುಬಿಟ್ಟಿತು. 5 ಅಮಲೇರಿದವರೇ, ಎಚ್ಚರಗೊಳ್ಳಿರಿ ಮತ್ತು ಅಳಿರಿ! ದ್ರಾಕ್ಷಾರಸ ಕುಡಿಯುವವರೇ, ಗೋಳಾಡಿರಿ, ಏಕೆಂದರೆ ದ್ರಾಕ್ಷಾರಸದ ಸಿಹಿಯು ನಿಮ್ಮ ಬಾಯಿಗೆ ಸಿಕ್ಕುವುದಿಲ್ಲ. 6 ನನ್ನ ದೇಶದ ಮೇಲೆ ಬಲಿಷ್ಠವಾದ ಹಾಗೂ ಅಸಂಖ್ಯಾತವಾದ ಒಂದು ಜನಾಂಗವು ಏರಿ ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ; ಅದರ ಕೋರೆ ಹಲ್ಲುಗಳು ಮೃಗರಾಜನ ಕೋರೆಗಳೇ. 7 ಅದು ನನ್ನ ದ್ರಾಕ್ಷಾತೋಟವನ್ನು ಹಾಳುಮಾಡಿ, ನನ್ನ ಅಂಜೂರದ ಗಿಡವನ್ನು ಮುರಿದುಹಾಕಿದೆ. ಅವುಗಳನ್ನು ಹಾಳುಮಾಡಿ ದೂರ ಬಿಸಾಡಿಬಿಟ್ಟಿದೆ; ಅದರ ಕೊಂಬೆಗಳು ಬಿಳುಪಾದವು. 8 ಯೌವನದ ಪತಿಗಾಗಿ ದುಃಖದಿಂದ ಗೋಣಿತಟ್ಟನ್ನು ಧರಿಸಿಕೊಂಡು ಗೋಳಾಡುವ ಕನ್ಯೆಯಂತೆ ಗೋಳಾಡಿರಿ. 9 ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ಯೆಹೋವನ ಆಲಯದಿಂದ ತೆಗೆಯಲ್ಪಟ್ಟಿದೆ. ಯೆಹೋವನ ಸೇವಕರಾದ ಯಾಜಕರು ಗೋಳಾಡುತ್ತಾರೆ. 10 ಬೆಳೆ ಬೆಳೆಯುವ ಹೊಲವು ಹಾಳಾಗಿದೆ, ನೆಲವು ದುಃಖದಲ್ಲಿ ಮುಳುಗಿದೆ. ಏಕೆಂದರೆ ಧಾನ್ಯವು ನಾಶವಾಗಿದೆ, ಹೊಸ ದ್ರಾಕ್ಷಾರಸವು ಒಣಗಿದೆ, ಎಣ್ಣೆಯು ಕೆಟ್ಟುಹೋಗಿದೆ. 11 ರೈತರೇ, ರೋದಿಸಿರಿ, ತೋಟಗಾರರೇ ಗೋಳಾಡಿರಿ, ಗೋದಿಯೂ ಮತ್ತು ಜವೆಗೋದಿಯೂ ಹಾಳಾಗಿವೆ. ಹೊಲದ ಬೆಳೆಯು ನಾಶವಾಗಿದೆ. 12 ದ್ರಾಕ್ಷಾಲತೆಯು ಒಣಗಿದೆ ಮತ್ತು ಅಂಜೂರದ ಗಿಡವು ಬಾಡಿಹೋಗಿದೆ; ದಾಳಿಂಬೆ, ಖರ್ಜೂರ ಮತ್ತು ಸೇಬು ಮರಗಳು ಹಾಗು ಹೊಲದ ಸಕಲ ವನವೃಕ್ಷಗಳು ಒಣಗಿ ಹೋಗಿವೆ. ಮನುಷ್ಯರು ಸೊರಗಿ ಸಂತೋಷವಿಲ್ಲದೆ ಕಳೆಗುಂದಿದ್ದಾರೆ. ಜನರನ್ನು ಎಚ್ಚರಿಸಿ ಪ್ರಾರ್ಥನೆಗೆ ಆಹ್ವಾನಿಸಿದ್ದು 13 ಯಾಜಕರೇ, ಗೋಣಿತಟ್ಟನ್ನು ಉಟ್ಟುಕೊಂಡು ಗೋಳಾಡಿರಿ! ಯಜ್ಞವೇದಿಯ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಬಿದ್ದುಕೊಂಡಿರಿ. ಏಕೆಂದರೆ ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ನಿಮ್ಮ ದೇವರ ಆಲಯಕ್ಕೆ ಬಾರದೆ ನಿಂತುಹೋಗಿದೆ. 14 ಉಪವಾಸ ಪ್ರಾರ್ಥನೆಯ ದಿನವನ್ನು ಏರ್ಪಡಿಸಿರಿ, ಪವಿತ್ರ ಸಭೆಯನ್ನು ಸೇರಿಸಿರಿ. ಹಿರಿಯರನ್ನೂ ಮತ್ತು ಸಮಸ್ತ ದೇಶದ ನಿವಾಸಿಗಳನ್ನೂ ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಬರಮಾಡಿ, ಯೆಹೋವನಿಗೆ ಮೊರೆಯಿಡಿರಿ. 15 ಯೆಹೋವನು ಬರುವ ದಿನವು ಸಮೀಪಿಸಿತು. ಅದು ಸರ್ವಶಕ್ತನಾದ ಯೆಹೋವನಿಂದ ನಾಶವಾಗುವ ದಿನ. 16 ನಮ್ಮ ಆಹಾರವು ನಮ್ಮ ಕಣ್ಣೆದುರಿಗೆ ಹಾಳಾಯಿತಲ್ಲಾ, ಸಂತೋಷವೂ ಹಾಗೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತ್ತಲ್ಲಾ! 17 ಬೀಜಗಳು, ಹೆಂಟೆಗಳ ಕೆಳಗೆ ಕೆಟ್ಟುಹೋಗಿವೆ. ಉಗ್ರಾಣಗಳು ಬರಿದಾಗಿವೆ. ಕಣಜಗಳು ಕೆಡವಲ್ಪಟ್ಟಿವೆ, ಏಕೆಂದರೆ ಧಾನ್ಯವು ಒಣಗಿದೆ. 18 ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಕಳವಳಗೊಂಡಿವೆ. ಏಕೆಂದರೆ ಅವುಗಳಿಗೆ ಮೇವು ಇಲ್ಲ. ಕುರಿಹಿಂಡುಗಳು ಕಷ್ಟಪಡುತ್ತವೆ. 19 ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಲುಗಾವಲನ್ನು ಬೆಂಕಿಯು ನುಂಗಿಬಿಟ್ಟಿದೆ, ವನವೃಕ್ಷಗಳನ್ನೆಲ್ಲಾ ಜ್ವಾಲೆಯು ಸುಟ್ಟುಬಿಟ್ಟಿದೆ. 20 ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿಹೋಗಿವೆ. ಕಾಡಿನ ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.