Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಇತರ ಪಾಪ ಅಪರಾಧಗಳಿಗೆ ಪ್ರಾಯಶ್ಚಿತ್ತ ಯಜ್ಞ

1 ಯೆಹೋವನು ಮೋಶೆಗೆ,

2 “ಯಾವನಾದರೂ ಪಾಪಮಾಡಿ, ಯೆಹೋವನಿಗೆ ವಿರುದ್ಧವಾಗಿ, ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ಅಥವಾ ತನ್ನ ಬಳಿಯಲ್ಲಿ ಇಡಲ್ಪಟ್ಟ ಅಡವಿಟ್ಟ ವಸ್ತುಗಳ ವಿಷಯದಲ್ಲಾಗಲಿ ಸುಳ್ಳಾಡುವುದರಿಂದ, ಮತ್ತೊಬ್ಬನನ್ನು ಮೋಸಗೊಳಿಸಿದ್ದರಿಂದ,

3 ಮತ್ತೊಬ್ಬನು ಕಳೆದುಕೊಂಡದ್ದನ್ನು ತಾನು ಕಂಡು ಸುಳ್ಳಾಣೆಯಿಟ್ಟದ್ದರಿಂದ, ಇವುಗಳಲ್ಲಿ ಯಾವ ವಿಷಯದಲ್ಲಾದರೂ ಒಬ್ಬನು ಪಾಪಮಾಡಿದರೆ ಯೆಹೋವನಿಗೆ ದ್ರೋಹಿಯಾಗಿ ದೋಷಕ್ಕೆ ಒಳಗಾಗುವನು.

4 ಅವನು ಪಾಪಮಾಡಿ ಅಪರಾಧಿಯಾಗಿರುವುದರಿಂದ ಅವನು ತಾನು ಕದ್ದದ್ದನ್ನು, ಮೋಸದಿಂದ ಪಡೆದದ್ದನ್ನು ತನ್ನ ವಶಕ್ಕೆ ತೆಗೆದುಕೊಂಡದ್ದನ್ನು, ತಾನು ಕಂಡುಕೊಂಡದ್ದನ್ನು,

5 ಬೇರೆ ಯಾವುದರ ವಿಷಯದಲ್ಲಿ ಅವನು ಸುಳ್ಳಾಣೆಯಿಟ್ಟನೋ ಅದನ್ನು ಪೂರ್ತಿಯಾಗಿ ತಂದುಕೊಡಬೇಕಲ್ಲದೆ, ಐದನೆಯ ಒಂದು ಪಾಲನ್ನು ಹೆಚ್ಚಾಗಿ ಕೊಡಬೇಕು. ಅವನು ಪ್ರಾಯಶ್ಚಿತ್ತಯಜ್ಞವನ್ನು ಮಾಡುವ ದಿನದಲ್ಲೇ ಅದನ್ನು ನ್ಯಾಯವಾದ ಅದರ ಒಡೆಯನಿಗೆ ಹಿಂದಕ್ಕೆ ಕೊಡಬೇಕು.

6 ಅವನು ಪ್ರಾಯಶ್ಚಿತ್ತಕ್ಕಾಗಿ ನಿನಗೆ ಸರಿಯೆಂದು ತೋರುವ ಪೂರ್ಣಾಂಗವಾದ ಟಗರನ್ನು ಹಿಂಡಿನಿಂದ ತಂದು ಅದನ್ನು ಯೆಹೋವನಿಗೆಂದು ಯಾಜಕನಿಗೆ ಒಪ್ಪಿಸಬೇಕು.

7 ಯಾಜಕನು ಅವನಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದನೋ ಆ ವಿಷಯದಲ್ಲಿ ಅವನಿಗೆ ಕ್ಷಮಾಪಣೆಯಾಗುವುದು” ಎಂದು ಹೇಳಿದನು.


ಸರ್ವಾಂಗಹೋಮ ವಿಷಯವಾದ ನಿಯಮಗಳು

8 ಅನಂತರ ಯೆಹೋವನು ಮೋಶೆಗೆ,

9 “ನೀನು ಆರೋನನಿಗೂ ಮತ್ತು ಅವನ ವಂಶದವರಿಗೂ ಮುಂದಿನ ಸಂಗತಿಗಳನ್ನು ಆಜ್ಞಾಪಿಸು, ‘ಇವು ಸರ್ವಾಂಗಹೋಮ ವಿಷಯವಾದ ನಿಯಮಗಳು: ಸರ್ವಾಂಗಹೋಮದ್ರವ್ಯವು ರಾತ್ರಿಯೆಲ್ಲಾ ಮತ್ತು ಮರುದಿನದ ಬೆಳಗಿನ ವರೆಗೂ ಯಜ್ಞವೇದಿಯ ಮೇಲೆ ಉರಿಯುತ್ತಾ ಇರಬೇಕು. ಅದು ನಂದಬಾರದು.

10 ಯಾಜಕನು ನಾರಿನ ನಿಲುವಂಗಿಯನ್ನು ಧರಿಸಿಕೊಂಡು, ಮಾನರಕ್ಷಕವಾದ ನಾರಿನ ಒಳಉಡುಪನ್ನು ಹಾಕಿಕೊಂಡು, ಯಜ್ಞವೇದಿಯ ಮೇಲಣ ಸರ್ವಾಂಗಹೋಮದ್ರವ್ಯದ ಬೂದಿಯನ್ನು ಎತ್ತಿ ಯಜ್ಞವೇದಿಯ ಬಳಿಯಲ್ಲಿ ಇಡಬೇಕು.

11 ಅನಂತರ ಆ ವಸ್ತ್ರಗಳನ್ನು ತೆಗೆದಿಟ್ಟು, ಬೇರೆ ವಸ್ತ್ರಗಳನ್ನು ಹಾಕಿಕೊಂಡು, ಆ ಬೂದಿಯನ್ನು ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.

12 ಯಜ್ಞವೇದಿಯ ಮೇಲಣ ಬೆಂಕಿ ಸರ್ವಾಂಗಹೋಮದ್ರವ್ಯದಿಂದ ಉರಿಯುತ್ತಲೇ ಇರಬೇಕು; ಅದು ಆರಿಹೋಗಬಾರದು. ಪ್ರತಿದಿನವೂ ಹೊತ್ತಾರೆಯಲ್ಲಿ ಯಾಜಕನು ಕಟ್ಟಿಗೆಯನ್ನು ತಂದುಹಾಕಿ, ಬೆಂಕಿ ಉರಿಸಿ, ಅದರ ಮೇಲೆ ಹೋಮದ್ರವ್ಯವನ್ನು ಕ್ರಮಪಡಿಸಿ, ಸಮಾಧಾನಯಜ್ಞಪಶುಗಳ ಕೊಬ್ಬನ್ನು ಅದರ ಮೇಲೆ ಹೋಮಮಾಡಬೇಕು.

13 ಬೆಂಕಿಯು ಯಜ್ಞವೇದಿಯ ಮೇಲೆ ಯಾವಾಗಲೂ ಉರಿಯುತ್ತಿರಬೇಕು; ಆರಿಹೋಗಬಾರದು.


ಧಾನ್ಯನೈವೇದ್ಯ

14 “‘ಧಾನ್ಯನೈವೇದ್ಯ ವಿಷಯವಾದ ನಿಯಮಗಳು: ಆರೋನನ ವಂಶದವರು ನೈವೇದ್ಯದ್ರವ್ಯವನ್ನು ಯೆಹೋವನ ಸನ್ನಿಧಿಯಲ್ಲಿ ಯಜ್ಞವೇದಿಯ ಎದುರಾಗಿಯೇ ಸಮರ್ಪಿಸಬೇಕು.

15 ಅವರಲ್ಲಿ ಒಬ್ಬನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಎಣ್ಣೆ ಹೊಯ್ದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಮತ್ತು ಅದರ ಮೇಲಿರುವ ಧೂಪವೆಲ್ಲವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡಬೇಕು.

16 ಉಳಿದದ್ದನ್ನು ಆರೋನನೂ ಮತ್ತು ಅವನ ವಂಶದವರೂ ತಿನ್ನಬಹುದು; ಅವರು ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದೊಳಗೆ ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು.

17 ಅದಕ್ಕೆ ಹುಳಿಹಿಟ್ಟು ಸೇರಿಸಿ ಸುಡಬಾರದು. ನನಗೆ ಹೋಮರೂಪವಾಗಿ ಸಮರ್ಪಿಸಿದ ದ್ರವ್ಯಗಳಲ್ಲಿ ಅದನ್ನು ಅವರ ಪಾಲಿಗೆ ಬಿಟ್ಟಿದ್ದೇನೆ. ದೋಷಪರಿಹಾರಕ ಯಜ್ಞದ್ರವ್ಯದಂತೆಯೂ ಮತ್ತು ಪ್ರಾಯಶ್ಚಿತ್ತ ಯಜ್ಞದ್ರವ್ಯದಂತೆಯೂ ಅದು ಮಹಾಪರಿಶುದ್ಧವಾದದ್ದು.

18 ಆರೋನನ ವಂಶದವರಾದ ಗಂಡಸರೆಲ್ಲರೂ ಅದನ್ನು ತಿನ್ನಬಹುದು. ಯೆಹೋವನಿಗೆ ಹೋಮವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಅದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಸಲ್ಲತಕ್ಕದ್ದೆಂಬುದು ಶಾಶ್ವತನಿಯಮ. ಆ ದ್ರವ್ಯಗಳಿಗೆ ತಗಲಿದ್ದೆಲ್ಲಾ ಪರಿಶುದ್ಧವಾಗುವುದು’” ಎಂದು ಹೇಳಿದನು.

19 ಯೆಹೋವನು ಮೋಶೆಯೊಂದಿಗೆ ಪುನಃ ಮಾತನಾಡಿ,

20 “ಆರೋನನಿಗೆ ಅಭಿಷೇಕವಾದ ದಿನ ಮೊದಲುಗೊಂಡು ಅವನೂ ಮತ್ತು ಅವನ ವಂಶದವರೂ ಯೆಹೋವನಿಗೆ ಸಮರ್ಪಿಸಬೇಕಾದ ಧಾನ್ಯ ನೈವೇದ್ಯ ಕ್ರಮ ಹೇಗೆಂದರೆ, ಅವರು ನಿತ್ಯವೂ ಮೂರು ಸೇರು ಗೋದಿಹಿಟ್ಟನ್ನು, ಹೊತ್ತಾರೆ ಅರ್ಧವನ್ನು ಹಾಗೂ ಸಾಯಂಕಾಲ ಅರ್ಧವನ್ನು ಸಮರ್ಪಿಸಬೇಕು.

21 ಕಬ್ಬಿಣದ ಹಂಚಿನ ಮೇಲೆ ಎಣ್ಣೆ ಸವರಿ ಅದನ್ನು ಸುಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನಸಿದ್ದಾಗಿರಬೇಕು. ಅದನ್ನು ಭಾಗಭಾಗವಾಗಿ ಮಾಡಿ ಯೆಹೋವನಿಗೆ ಸುವಾಸನೆಯುಳ್ಳ ನೈವೇದ್ಯವನ್ನಾಗಿ ಸಮರ್ಪಿಸಬೇಕು.

22 ಆರೋನನ ಸಂತತಿಯವರಲ್ಲಿ ಯಾವನು ಅವನ ತರುವಾಯ ಅಭಿಷಿಕ್ತನಾದ ಯಾಜಕನ ಪಟ್ಟಕ್ಕೆ ಬರುವನೋ ಅವನೇ ಅದನ್ನು ಸಮರ್ಪಿಸಬೇಕು; ಇದು ಶಾಶ್ವತನಿಯಮ. ಅದನ್ನು ಯೆಹೋವನಿಗೆ ಸಂಪೂರ್ಣವಾಗಿ ಹೋಮಮಾಡಬೇಕು.

23 ಯಾಜಕರು ತಮಗೋಸ್ಕರ ಸಮರ್ಪಿಸುವ ನೈವೇದ್ಯದ್ರವ್ಯಗಳನ್ನು ಸಂಪೂರ್ಣವಾಗಿ ಹೋಮಮಾಡಬೇಕು; ಅದನ್ನು ತಿನ್ನಲೇಬಾರದು” ಎಂದು ಹೇಳಿದನು.


ದೋಷಪರಿಹಾರಕ ಯಜ್ಞದ ನಿಯಮಗಳು

24 ಯೆಹೋವನು ಮೋಶೆಯೊಂದಿಗೆ ಪುನಃ ಮಾತನಾಡಿ,

25 “ನೀನು ಆರೋನನಿಗೂ ಮತ್ತು ಅವನ ವಂಶದವರಿಗೂ ಹೀಗೆ ಆಜ್ಞಾಪಿಸು, ‘ದೋಷಪರಿಹಾರಕ ಯಜ್ಞದ ನಿಯಮಗಳು: ಸರ್ವಾಂಗಹೋಮದ ಪಶುವನ್ನು ವಧಿಸುವ ಸ್ಥಳದಲ್ಲೇ ದೋಷಪರಿಹಾರಕ ಯಜ್ಞಪಶುವನ್ನು ಯೆಹೋವನ ಸನ್ನಿಧಿಯಲ್ಲಿ ವಧಿಸಬೇಕು. ಅದು ಮಹಾಪರಿಶುದ್ಧವಾದದ್ದು.

26 ಅದನ್ನು ಸಮರ್ಪಿಸುವ ಯಾಜಕನು ಅದರ ಮಾಂಸವನ್ನು ಊಟಮಾಡಬೇಕು. ಪವಿತ್ರಸ್ಥಳದೊಳಗೆ ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ಅದನ್ನು ಊಟಮಾಡಬೇಕು.

27 ಆ ಪಶುವಿನ ಮಾಂಸಕ್ಕೆ ಸೋಂಕಿದ್ದೆಲ್ಲವೂ ಪರಿಶುದ್ಧವಾಗುವುದು. ಅದರ ರಕ್ತದಲ್ಲಿ ಸ್ವಲ್ಪವಾದರೂ ಬಟ್ಟೆಯ ಮೇಲೆ ಬಿದ್ದರೆ ಆ ಬಟ್ಟೆಯನ್ನು ಪವಿತ್ರಸ್ಥಳದೊಳಗೆ ಒಗೆದುಕೊಳ್ಳಬೇಕು.

28 ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ದಾದರೆ ಆ ಪಾತ್ರೆಯನ್ನು ಉಜ್ಜಿ ನೀರಿನಿಂದ ತೊಳೆಯಬೇಕು.

29 ಯಾಜಕರಲ್ಲಿ ಗಂಡಸರೆಲ್ಲರೂ ಅದನ್ನು ತಿನ್ನಬಹುದು; ಅದು ಮಹಾಪರಿಶುದ್ಧವಾದದ್ದು.

30 ಆದರೆ ದೋಷಪರಿಹಾರಕ ಯಜ್ಞಪಶುಗಳಲ್ಲಿ ಯಾವ ಪಶುವಿನ ರಕ್ತವನ್ನು ದೋಷಪರಿಹಾರಕ್ಕಾಗಿ ದೇವದರ್ಶನದ ಗುಡಾರದೊಳಗೆ, ಪವಿತ್ರ ಸ್ಥಾನದೊಳಗೆ ತಂದಿರುವರೋ ಅದರ ಮಾಂಸವನ್ನು ತಿನ್ನಲೇಬಾರದು. ಬೆಂಕಿಯಲ್ಲಿ ಸುಟ್ಟುಬಿಡಬೇಕು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು