ಯಾಜಕಕಾಂಡ 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಧಾನ್ಯ ಸಮರ್ಪಣೆ 1 “‘ಯಾವನಾದರೂ ಯೆಹೋವನಿಗೆ ಧಾನ್ಯನೈವೇದ್ಯವನ್ನು ಮಾಡಬೇಕೆಂದಿದ್ದರೆ ಅದು ಗೋದಿಹಿಟ್ಟಿನದಾಗಿರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಹೊಯ್ದು ಅದರ ಮೇಲೆ ಧೂಪವನ್ನು ಇಡಬೇಕು. 2 ಅದನ್ನು ಆರೋನನ ವಂಶದವರಾದ ಯಾಜಕರ ಬಳಿಗೆ ತರಬೇಕು. ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಮತ್ತು ಧೂಪವೆಲ್ಲವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು. 3 ಆ ನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಮತ್ತು ಅವನ ವಂಶದವರಿಗೂ ಆಗಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷಗಳಲ್ಲಿ ಅತಿಪರಿಶುದ್ಧವಾಗಿದೆ. 4 “‘ನೀವು ಒಲೆಯಲ್ಲಿ ಅಡಿಗೆಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿಹಿಟ್ಟಿನ ಹೋಳಿಗೆಗಳು ಅಥವಾ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳು ಆಗಿರಬೇಕು. 5 ನೀವು ಅರ್ಪಿಸುವ ಧಾನ್ಯ ನೈವೇದ್ಯವು ಕಬ್ಬಿಣದ ಹಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿಹಿಟ್ಟಿನದಾಗಿರಬೇಕು. 6 ನೀವು ಅದನ್ನು ಚೂರುಚೂರಾಗಿ ಮುರಿದು, ಅದರ ಮೇಲೆ ಎಣ್ಣೆ ಹೊಯ್ಯಬೇಕು. ಇದು ಧಾನ್ಯನೈವೇದ್ಯವಾಗಿದೆ. 7 ನೀವು ಅರ್ಪಿಸುವ ಧಾನ್ಯ ನೈವೇದ್ಯ ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿಹಿಟ್ಟಿನದಾಗಿರಬೇಕು. 8 ನೀವು ಈ ಪದಾರ್ಥಗಳಿಂದ ಮಾಡಿದ ನೈವೇದ್ಯವನ್ನು ಯೆಹೋವನಿಗೆ ಸಮರ್ಪಿಸುವಾಗ ಅದನ್ನು ಯಾಜಕನಿಗೆ ಒಪ್ಪಿಸಬೇಕು; ಅವನೇ ಅದನ್ನು ಯಜ್ಞವೇದಿಯ ಬಳಿಗೆ ತರಬೇಕು. 9 ಯಾಜಕನು ನೈವೇದ್ಯವನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಅದರಲ್ಲಿ ಸ್ವಲ್ಪಭಾಗವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು. 10 ಧಾನ್ಯ ನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಮತ್ತು ಅವನ ವಂಶದವರಿಗೂ ಕೊಡಬೇಕು; ಅದು ಯೆಹೋವನಿಗೆ ಅರ್ಪಿತವಾದ ಹೋಮಶೇಷವಾದ್ದರಿಂದ ಅತಿಪರಿಶುದ್ಧವಾಗಿದೆ. 11 “‘ನೀವು ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸುವ ಯಾವ ಪದಾರ್ಥವನ್ನು ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಅಥವಾ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಹೋಮಮಾಡಬಾರದು. 12 ಅವುಗಳನ್ನು ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬಹುದೇ ಹೊರತು ಯಜ್ಞವೇದಿಯ ಮೇಲೆ ಪರಿಮಳವನ್ನು ಉಂಟುಮಾಡುವುದಕ್ಕಾಗಿ ಅವುಗಳನ್ನು ಹೋಮಮಾಡಬಾರದು. 13 ಎಲ್ಲಾ ನೈವೇದ್ಯ ಪದಾರ್ಥಗಳಿಗೂ ಉಪ್ಪುಹಾಕಿ ಸಮರ್ಪಿಸಬೇಕು. ಉಪ್ಪು ಯೆಹೋವನ ಸಂಗಡ ನಿಮಗಿರುವ ಒಡಂಬಡಿಕೆಯನ್ನು ಸೂಚಿಸುವುದರಿಂದ ಅದು ಯಾವ ನೈವೇದ್ಯ ಪದಾರ್ಥವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲಾ ಪದಾರ್ಥಗಳಲ್ಲಿಯೂ ಉಪ್ಪನ್ನು ಸೇರಿಸಲೇಬೇಕು. 14 “‘ನೀವು ಯೆಹೋವನಿಗೆ ಧಾನ್ಯ ನೈವೇದ್ಯದ ಪ್ರಥಮಫಲವನ್ನು ಸಮರ್ಪಣೆ ಮಾಡಬೇಕಾದರೆ ಗೋದಿಯ ತಾಜವಾದ ಹಸೀ ತೆನೆಗಳನ್ನು ಬೆಂಕಿಯಲ್ಲಿ ಸುಟ್ಟು, ಉಮ್ಮಿಗೆಯನ್ನು ಸಮರ್ಪಿಸಬೇಕು. 15 ಅದು ಧಾನ್ಯನೈವೇದ್ಯ ವಸ್ತುವಾದ್ದರಿಂದ ನೀವು ಅದರ ಮೇಲೆ ಎಣ್ಣೆ ಹೊಯ್ದು ಧೂಪವಿಡಬೇಕು. 16 ಯಾಜಕನು ನೈವೇದ್ಯವನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಉಮ್ಮಿಗೆಯಲ್ಲಿಯೂ ಮತ್ತು ಎಣ್ಣೆಯಲ್ಲಿಯೂ ಸ್ವಲ್ಪಭಾಗವನ್ನು ತೆಗೆದುಕೊಂಡು ಧೂಪವೆಲ್ಲವನ್ನು ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಯೆಹೋವನಿಗೆ ಹೋಮಮಾಡಬೇಕು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.