Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಐಶ್ವರ್ಯವಂತರ ನಡತೆಯ ಬಗ್ಗೆ ಎಚ್ಚರಿಕೆ

1 ಐಶ್ವರ್ಯವಂತರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.

2 ನಿಮ್ಮ ಐಶ್ವರ್ಯ, ಸಂಪತ್ತು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ.

3 ನಿಮ್ಮ ಚಿನ್ನ, ಬೆಳ್ಳಿಗಳು ತುಕ್ಕು ಹಿಡಿದು ಮಣ್ಣಿಗೆ ಸಮವಾಗಿದೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು, ಬೆಂಕಿಯಂತೆ ನಿಮ್ಮ ಮಾಂಸವನ್ನು ದಹಿಸಿಬಿಡುವುದು. ಅಂತ್ಯಕಾಲ ಬಂದರೂ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ.

4 ಇಗೋ, ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು ಪೈರು ಕೊಯ್ದದವರ ಕೂಗು ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ.

5 ಭೂಲೋಕದಲ್ಲಿ ನೀವು ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ; ವಧೆಯ ದಿನಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ.

6 ನೀವು ನೀತಿವಂತನನ್ನು ಖಂಡಿಸಿ ಕೊಂದು ಹಾಕಿದ್ದೀರಿ; ಅವನಾದರೋ ನಿಮ್ಮನ್ನು ವಿರೋಧಿಸುತ್ತಿಲ್ಲ.


ಹಿಂಸೆಪಡುವ ಕ್ರೈಸ್ತರಿಗೆ ಪ್ರೋತ್ಸಾಹವು

7 ಸಹೋದರರೇ, ಕರ್ತನು ಬರುವ ತನಕ ತಾಳ್ಮೆಯಿಂದಿರಿ. ವ್ಯವಸಾಯಮಾಡುವವರನ್ನು ನೋಡಿರಿ, ಅವನು ಭೂಮಿಯ ಬೆಲೆಬಾಳುವ ಫಲಕ್ಕಾಗಿ ಕಾದಿದ್ದು ಮುಂಗಾರು, ಹಿಂಗಾರು ಮಳೆಗಳು ಬರುವ ತನಕ ತಾಳ್ಮೆಯಿಂದಿರುವನು.

8 ನೀವೂ ತಾಳ್ಮೆಯಿಂದಿರಿ, ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ; ಏಕೆಂದರೆ ಕರ್ತನ ಬರೋಣವು ಹತ್ತಿರವಾಯಿತು.

9 ಸಹೋದರರೇ, ನೀವು ಒಬ್ಬರ ಮೇಲೊಬ್ಬರು ಆಪವಾದನೆ ಮಾಡಬೇಡಿರಿ; ಇದರಿಂದ ನ್ಯಾಯವಿಚಾರಣೆಗೆ ಗುರಿಯಾದಿರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾನೆ.

10 ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ.

11 ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ.


ನಂಬಿಕೆಯ ಪ್ರಾರ್ಥನೆ ಕುರಿತದ್ದು

12 ಮುಖ್ಯವಾಗಿ ನನ್ನ ಸಹೋದರರೇ, ಆಣೆಯಿಡಲೇ ಬೇಡಿರಿ. ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ಯಾವುದರ ಮೇಲಾಗಲಿ ಆಣೆಯಿಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ.

13 ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದರೆ, ಅವನು ದೇವರನ್ನು ನಂಬಿಕೆಯಿಂದ ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನು ಇದ್ದರೆ, ಅವನು ದೇವರಿಗೆ ಸ್ತುತಿಗೀತೆಗಳನ್ನು ಹಾಡಲಿ.

14 ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ.

15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು; ಅವನು ಪಾಪ ಮಾಡಿದವನಾಗಿದ್ದರೆ, ದೇವರು ಆ ಪಾಪಗಳನ್ನು ಕ್ಷಮಿಸುವನು.

16 ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.

17 ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, ಅವನು ಮಳೆ ಬರಬಾರದೆಂದು ಭಕ್ತಿಯಿಂದ ಪ್ರಾರ್ಥಿಸಲು ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ.

18 ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು.

19 ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ;

20 ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲ್ಲಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು