ಕೀರ್ತನೆಗಳು 73 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ತೃತೀಯ ಭಾಗವು 73-89 ಆಸಾಫನ ಕೀರ್ತನೆ. ಕೀರ್ತ 49 ದುಷ್ಟರ ಸೌಭಾಗ್ಯವನ್ನು ಕಂಡು ವಿಶ್ವಾಸಭ್ರಷ್ಟರಾಗಬಾರದೆಂಬ ಬೋಧನೆ 1 ದೇವರು ನಿರ್ಮಲಚಿತ್ತರಾದ ಇಸ್ರಾಯೇಲರಿಗೆ ದಯಾಪರನೇ ಹೌದು. 2 ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ. 3 ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು. 4 ಅವರ ಮರಣವು ನಿರ್ಬಾಧಕವಾಗಿದೆ; ಅವರ ದೇಹವು ಕೊಬ್ಬಿದೆ. 5 ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವುದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವುದಿಲ್ಲ. 6 ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ. 7 ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ. 8 ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ. 9 ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು. 10 ಆದುದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; ಅವರು ಅವರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಿಲ್ಲ. 11 ಅವರು “ದೇವರು ವಿಚಾರಿಸುವುದೆಲ್ಲಿ? ಪರಾತ್ಪರನಾದ ದೇವರು ಚಿಂತಿಸುವದುಂಟೋ” ಅಂದುಕೊಳ್ಳುತ್ತಾರೆ. 12 ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ. 13 ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡಿದ್ದೂ, ಶುದ್ಧತ್ವದಲ್ಲಿ ಕೈತೊಳಕೊಂಡಿದ್ದೂ ವ್ಯರ್ಥವೇ ಸರಿ. 14 ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು, ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ. 15 ನಾನು ಈ ಪ್ರಕಾರ ಬಾಯಿಬಿಡುವುದಕ್ಕೆ ಮನಸ್ಸು ಮಾಡಿಕೊಂಡಿದ್ದರೆ, ನಿನ್ನ ಭಕ್ತಕುಲಕ್ಕೆ ದ್ರೋಹಿಯಾಗುತ್ತಿದ್ದೆನು. 16 ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು. 17 ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು. 18 ಹೌದು, ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು, ಬೀಳಿಸಿ, ನಾಶಮಾಡಿಬಿಡುತ್ತೀ. 19 ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರ ರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ. 20 ಎಚ್ಚರವಾದವನು ಕನಸ್ಸನ್ನು ಕಂಡ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ. 21 ನನ್ನ ಮನಸ್ಸು ನೊಂದುಹೋಗಿತ್ತು; ಆಂತರ್ಯದಲ್ಲಿ ಅಲಗು ನೆಟ್ಟಂತಿತ್ತು. 22 ನಾನು ವಿವೇಕಹೀನ ತಿಳಿವಳಿಕೆ ಇಲ್ಲದವನಂತೆ, ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು. 23 ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು, 24 ನಿನ್ನ ಚಿತ್ತವನ್ನು ತಿಳಿಯಪಡಿಸಿ, ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ. 25 ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ. 26 ತನುಮನಗಳು ಕ್ಷಯಿಸಿದರೂ ನನ್ನ ಆತ್ಮಕ್ಕೆ ಬಲವು ನನ್ನ ಶಾಶ್ವತವಾದ ಪಾಲೂ ದೇವರೇ. 27 ಇಗೋ, ನಿನ್ನನ್ನು ಬಿಟ್ಟವರು ನಾಶವಾಗುವರು; ನಿನಗೆ ದ್ರೋಹ ಮಾಡಿದವರೆಲ್ಲರನ್ನು ನಿರ್ಮೂಲ ಮಾಡುತ್ತೀ. 28 ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.