Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ತಿಮೊಥೆಯನಿಗೆ 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲಹೊಂದಿದವನಾಗು.

2 ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು.

3 ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು.

4 ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ.

5 ಇದಲ್ಲದೆ ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವುದಿಲ್ಲ.

6 ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ.

7 ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು.

8 ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ಇದೇ ನಾನು ಸಾರುವ ಸುವಾರ್ತೆ.

9 ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.

10 ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.

11 ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು,

12 ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.

13 ನಾವು ಅಪನಂಬಿಗಸ್ತರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು. ಆತನು ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.”


ಅನುಮೋದಿತನಾದ ಸೇವಕನು

14 ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು.

15 ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.

16 ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.

17 ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.

18 ಅವರು ಸತ್ಯಭ್ರಷ್ಟರಾಗಿ ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ.

19 ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.

20 ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ.

21 ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ, ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು.

22 ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.

23 ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.

24 ಕರ್ತನ ಸೇವಕನು ಜಗಳವಾಡದೆ, ಎಲ್ಲರ ವಿಷಯದಲ್ಲಿ ಸಾಧುವೂ, ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ

25 ಎದುರಿಸುವವರನ್ನು ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು. ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.

26 ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು